ಆರ್. ಅಶೋಕ
ಬೆಳಗಾವಿ: ‘ವಿಧಾನಸಭೆಯಲ್ಲಿ ಗುರುವಾರ ಸಭಾತ್ಯಾಗ ಮಾಡಬೇಕೋ ಅಥವಾ ಧರಣಿ ಮಾಡಬೇಕೋ ಎಂಬ ವಿಷಯದಲ್ಲಿ ಗೊಂದಲ ಇರಲಿಲ್ಲ. ಸಮನ್ವಯ ಕೊರತೆ ಇರುವುದರಿಂದ ಈ ರೀತಿ ಆಗಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಸಭಾತ್ಯಾಗ ತೀರ್ಮಾನದ ಕುರಿತು ಬಿಜೆಪಿ ನಾಯಕರಲ್ಲಿ ಅಸಮಾಧಾನ ಇರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ಅವರು, ‘ನಾನು, ಯತ್ನಾಳ, ಅಶ್ವತ್ಥನಾರಾಯಣ, ವಿಜಯೇಂದ್ರ ಎಲ್ಲರೂ ಸೇರಿ ಸಭಾತ್ಯಾಗ ಮಾಡುವ ತೀರ್ಮಾನ ಮಾಡಿದ್ದೆವು. ಎಲ್ಲ ಹಿರಿಯರಿಗೂ ಇದು ಗೊತ್ತಿತ್ತು. ನಮ್ಮ ನಿರ್ಧಾರಗಳು ಹಿಂದಿನ ಸಾಲಿನಲ್ಲಿ ಇದ್ದವರಿಗೆ ಸರಿಯಾಗಿ ತಲುಪಿರಲಿಲ್ಲ’ ಎಂದರು.
‘ನೀವು ಹೊಂದಾಣಿಕೆ ರಾಜಕಾರಣ (ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್) ಮಾಡುತ್ತೀರಿ’ ಎಂದು ವಿಶ್ವನಾಥ್ ಆಪಾದಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ಯಾರೋ ಏನೋ ಹೇಳಿದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರನ್ನು ಕರೆಯಿಸಿ ಮಾತನಾಡುತ್ತೇನೆ ಎಂದು ಅಶೋಕ ಹೇಳಿದರು.
ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಬಸನಗೌಡ ಪಾಟೀಲ ಯತ್ನಾಳರು ಹೇಳಿದ್ದರು. ಸುಮ್ಮನೆ ಸಮಯ ವ್ಯರ್ಥ ಮಾಡುವುದು ಬೇಡ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.