ಬೆಂಗಳೂರು: ರಾಜ್ಯ ಮತ್ತು ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಪ್ರಮಾಣ ದಿನೇ ದಿನೇ ಕಡಿಮೆ ಆಗುತ್ತಿರುವುದರಿಂದ ಕೈಗಾರಿಕೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆ ಮತ್ತು ಸರಬರಾಜು ಕುರಿತು ಹಿರಿಯ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ
ನಡೆಸಿದ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ 580 ಮೆಟ್ರಿಕ್ ಟನ್ ಆಮ್ಲಜನಕಕ್ಕೆ ಬೇಡಿಕೆ ಇತ್ತು. ಬೇಡಿಕೆ ಕಡಿಮೆ ಆಗಿದೆ ಎಂದು ಕಡೆಗಣಿಸಬಾರದು. ಮೂರನೇ ಅಲೆ ಬಂದಲ್ಲಿ ಅದನ್ನು ಎದುರಿಸಲು ಅಗತ್ಯ ತಯಾರಿ ನಡೆಸಿಕೊಳ್ಳಬೇಕು. ಎಲ್ಲ ಜಿಲ್ಲಾ ಆಸ್ಪತ್ರೆಗಳೂ ಆಮ್ಲಜನಕ ತಯಾರಿಸುವಲ್ಲಿ ಸ್ವಾವಲಂಬಿಯಾಗಿಸಬೇಕು. ಅಲ್ಲದೆ, ಜಿಲ್ಲೆಗಳಲ್ಲಿ ಬಫರ್ ಸ್ಟಾಕ್ ಸಂಗ್ರಹಣೆಗೆ ಅಗತ್ಯವಿರುವ ಸೌಲಭ್ಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದೂ ಸಲಹೆ ನೀಡಿದರು.
ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಹೊಸ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ತಂತ್ರಾಂಶದ ಮೂಲಕ ಆಸ್ಪತ್ರೆಗಳು ಬೇಡಿಕೆ ಸಲ್ಲಿಸಬಹುದು. ಸದ್ಯವೇ ಈ ತಂತ್ರಾಂಶ ಕಾರ್ಯಾರಂಭ ಮಾಡಲಿದೆ. ಕೋವಿಡ್ ಮೂರನೇ ಅಲೆ ಬಂದರೆ ಅದನ್ನು ಎದುರಿಸಲು ಸಹಾಯಕವಾಗಲಿದೆ ಎಂದು ಜಗದೀಶ ಶೆಟ್ಟರ್ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.