ನೆಲಮಂಗಲ: ‘ಕಷ್ಟ, ಅವಮಾನಗಳಿಂದ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ ಎಲ್ಲವನ್ನೂ ಮೆಟ್ಟಿನಿಂತೆ. ಬದುಕು ರೂಪಿಸಿದ ಕಲೆಯಲ್ಲಿ ತೊಡಗಿದ್ದರಿಂದ ನನಗೆಪದ್ಮಶ್ರೀ ಗೌರವ ಅರಸಿ ಬಂತು’ ಎಂದುಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಭಾವುಕರಾದರು.
ವಿಕಾಸ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ವಿಕಾಸ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.
‘ಮನೆಯಿಂದ ಹೊರಬಂದು, ಸ್ವಾವಲಂಬಿ ಜೀವನ ನಡೆಸುತ್ತಿದ್ದಾಗ ತಾಯಿ ಒಮ್ಮೆ, ‘ನನಗಿಂತ ಮೊದಲು ನೀನು ಸಾಯಬೇಕು. ನಾನು ಸತ್ತರೆ ನಿನಗೆ ಯಾರೂ ಇಲ್ಲ’ ಎಂದು ಕಣ್ಣೀರು ಹಾಕಿದ್ದರು‘ ಎಂದು ನೆನೆದರು.
‘ಎಸ್ಸೆಸ್ಸೆಲ್ಸಿ ಹಂತದಲ್ಲಿ ನನಗೆ ದೈಹಿಕ ಬದಲಾವಣೆಗಳಾಗಿದ್ದರಿಂದ ನನ್ನ ಪೋಷಕರೇ ಜೋಗತಿ ದೀಕ್ಷೆ ಕೊಡಿಸಿದರು. ಭಿಕ್ಷಾಟನೆ, ಕೂಲಿ ಎಲ್ಲ ತರಹದ ಕೆಲಸ ಮಾಡುತ್ತಿದ್ದೆ. ಜೋಗತಿ ಕಾಳವ್ವ ಅವರ ಶಿಷ್ಯಳಾಗಿ ಜೋಗತಿ ಪದಗಳು, ನಾಟಕಗಳಲ್ಲಿ ಯಲ್ಲಮ್ಮನ ಪಾತ್ರ, ಪುರುಷ ಪಾತ್ರ ಹೀಗೆ ಸಾವಿರಾರು ಪ್ರದರ್ಶನಗಳನ್ನು ನೀಡಿದೆ. ನಾನು ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಲಿಲ್ಲ, ಅವು ತಾನಾಗಿಯೇ ಅರಸಿ ಬಂದವು’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೋಹನ್, ‘ಸರ್ಕಾರದ ಬಹುತೇಕ ಎಲ್ಲ ಯೋಜನೆಗಳನ್ನು ಮಹಿಳೆಯರ ಹೆಸರಿನಲ್ಲಿ ನೀಡಲಾಗುತ್ತಿದೆ. ಇದು ಮಹಿಳೆಯರಿಗೆ ಸಿಕ್ಕ ಗೌರವ’ ಎಂದು ಹೇಳಿದರು.
ಸಿಂಚನ ಕಲಾಕೇಂದ್ರದ ಸಿ.ಎಚ್.ಸಿದ್ದಯ್ಯ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.