ಮಂಜುನಾಥ ರಾವ್
ಶಿವಮೊಗ್ಗ: ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ 8 ಗಂಟೆಗೆ ಶಿವಮೊಗ್ಗಕ್ಕೆ ತರಲಾಗುತ್ತಿದೆ.
ಶ್ರೀನಗರದಿಂದ ಬುಧವಾರ ಸಂಜೆ ಹೊರಟ ವಿಶೇಷ ವಿಮಾನ ರಾತ್ರಿ ಮುಂಬೈ ಮೂಲಕ ತಡರಾತ್ರಿ 2 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಹೊರಟು ಬೆಳಿಗ್ಗೆ ಶಿವಮೊಗ್ಗ ತಲುಪಲಿದೆ.
ಕಾಶ್ಮೀರಕ್ಕೆ ತೆರಳಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಂಜುನಾಥರಾವ್ ಅವರ ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜಯ ರಾವ್ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದು, ಪಾರ್ಥಿವ ಶರೀರ ಊರಿಗೆ ತರಲು ನೆರವಾಗಿದ್ದಾರೆ.
ಅರ್ಧ ದಿನ ವಹಿವಾಟು ಬಂದ್: ‘ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಹಾಗೂ ಮೃತ ಮಂಜುನಾಥ ರಾವ್ ಅವರ ಗೌರವಾರ್ಥ ಶಿವಮೊಗ್ಗದಲ್ಲಿ ವರ್ತಕರು ಅಂಗಡಿಗಳ ಬಾಗಿಲು ಹಾಕಿ ಅರ್ಧದಿನ ವಹಿವಾಟು ಬಂದ್ ಮಾಡಲಿದ್ದಾರೆ. ಮಧ್ಯಾಹ್ನ ಅಂತ್ಯಕ್ರಿಯೆ ಮುಗಿದ ನಂತರ ವಹಿವಾಟು ಮತ್ತೆ ಆರಂಭಿಸಲಿದ್ದಾರೆ’ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಮಂಜುನಾಥರಾವ್ ಅವರ ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.