ADVERTISEMENT

ಕುಂದಾಪುರ ತಾಲೂಕು ಕಚೇರಿ ಆವರಣದಲ್ಲಿ ಪಾಕ್ ಪರ ಘೋಷಣೆ: ಬಂಧನ

ಟಿವಿ ನೋಡಿ ನೋಡಿ ಈ ರೀತಿ ಆಗಿದ್ದಾನೆ: ಪೋಷಕರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 13:28 IST
Last Updated 2 ಮಾರ್ಚ್ 2020, 13:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಕುಂದಾಪುರ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಪಾಕಿಸ್ತಾನ ಜಿಂದಾಬಾದ್‌, ಜಿಹಾದ್‌ ಜಿಂದಾಬಾದ್‌ ಘೋಷಣೆ ಕೂಗಿದ ರಾಘವೇಂದ್ರ ಎಂಬಾತನ ವಿರುದ್ಧ ಪೊಲೀಸರು ಸೆಕ್ಷನ್‌ 124 ಎ ಅಡಿ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ರಾಘವೇಂದ್ರ ಕುಂದಾಪುರದ ಕೋಡಿ ಮೂಲದ ವ್ಯಕ್ತಿ. ಸೋಮವಾರ ತಹಶೀಲ್ದಾರ್‌ ಕಚೇರಿಗೆ ಬಂದಿದ್ದ ಆತ ಏಕಾಏಕಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗುತ್ತಾ ಅಡ್ಡಾಡುತ್ತಿದ್ದ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ರಾಘವೇಂದ್ರನ್ನು ಎಳೆದೊಯ್ದರು.

ವಿಚಾರಣೆ ವೇಳೆ ಮೇಲ್ನೋಟಕ್ಕೆ ಆರೋಪಿ ಮಾನಸಿಕ ಅಸ್ವಸ್ಥ ಎಂಬ ಅಂಶ ತಿಳಿದುಬಂದಿದ್ದು, ಪೊಲೀಸರು ಪೂರ್ವಾಪರ ಪರಿಶೀಲಿಸುತ್ತಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಮತ್ತೊಂದೆಡೆ, ಪೋಷಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ‘ರಾಘವೇಂದ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಸೋಮವಾರ ಚಿಕಿತ್ಸೆಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಮೂತ್ರ ಮಾಡುವುದಾಗಿ ಹೊರಗೆ ಹೋದವ ಮರಳಿ ಬರಲಿಲ್ಲ. ಬಳಿಕ ಮಾಧ್ಯಮಗಳಲ್ಲಿ ಮಗನ ಬಂಧನ ಸುದ್ದಿ ತಿಳಿಯಿತು' ಎಂದು ತಿಳಿಸಿದರು.

ಟಿವಿ ನೋಡಿ ಹೀಗಾದ:

ಈಚೆಗೆ ಟಿವಿಗಳಲ್ಲಿ ತೋರಿಸಲಾಗುತ್ತಿದ್ದ ಪಾಕಿಸ್ತಾನ ಪರ ಘೋಷಣೆ ಸುದ್ದಿಗಳನ್ನು ಹೆಚ್ಚಾಗಿ ನೋಡುತ್ತಿದ್ದ ರಾಘವೇಂದ್ರ ಪ್ರೇರೇಪಿತನಾಗಿ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದು ಪೋಷಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.