ADVERTISEMENT

ಕೊನೆಯ ದಿನಗಳಲ್ಲಿ ಮನೆಯಲ್ಲಿಯೇ ಆರೈಕೆ

ಕೇರಳ ಮಾದರಿಯಲ್ಲಿ ಉಪಶಾಮಕ ಚಿಕಿತ್ಸೆ ವಿಸ್ತರಿಸಲು ಮುಂದಾದ ಆರೋಗ್ಯ ಇಲಾಖೆ

ವರುಣ ಹೆಗಡೆ
Published 27 ಡಿಸೆಂಬರ್ 2019, 5:37 IST
Last Updated 27 ಡಿಸೆಂಬರ್ 2019, 5:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬದುಕಿನ ಕೊನೆಯ ದಿನಗಳನ್ನು ಆಸ್ಪತ್ರೆಯಲ್ಲಿ ನೋವಿನೊಂದಿಗೆ ಕಳೆಯುತ್ತಿರುವವರಿಗೆ ಮನೆಯಲ್ಲಿಯೇ ಉಪಶಾಮಕ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ಆರಂಭಿಸಿದೆ. ಇದರಿಂದಾಗಿ ರೋಗಿಗಳು ಅಂತಿಮ ದಿನಗಳನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯುವ ಅವಕಾಶ ಸಿಗಲಿದೆ.

ಕ್ಯಾನ್ಸರ್‌, ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶ ಮತ್ತು ಮೂತ್ರಪಿಂಡ ಸಮಸ್ಯೆ, ಎಚ್‌ಐವಿ ಸೇರಿದಂತೆ ವಿವಿಧ ಅಸಾಂಕ್ರಾಮಿಕ ಕಾಯಿಲೆಗಳನ್ನು ಮಾರಣಾಂತಿಕ ಎಂದು ಗುರುತಿಸಲಾಗಿದೆ. ಕೊನೆಯ ಹಂತದಲ್ಲಿ ಈ ಕಾಯಿಲೆ ಪತ್ತೆಯಾದಲ್ಲಿ ರೋಗಿಗಳು ಉಳಿಯುವ ಸಾಧ್ಯತೆ ಕಡಿಮೆ ಎನ್ನುವುದು ವೈದ್ಯರ ಅಭಿಮತ. ಆದ್ದರಿಂದಚಿಕಿತ್ಸೆ ಫಲಿಸುವುದಿಲ್ಲ ಎನ್ನುವುದು ಖಚಿತವಾಗಿರುವಂತಹ ರೋಗಿಗಳು ಕೊನೆಯ ದಿನಗಳನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯಬೇಕೆಂಬ ಉದ್ದೇಶದಿಂದ ಉಪಶಾಮಕ ಚಿಕಿತ್ಸೆಯನ್ನು ಪರಿಚಯಿಸಲಾಗಿದೆ. ಈ ಚಿಕಿತ್ಸೆಯಿಂದ ರೋಗಿಗಳಿಗೆ ಕಾಯಿಲೆಯ ನೋವು ಅಷ್ಟಾಗಿ ಬಾಧಿಸುವುದಿಲ್ಲ.

ಸದ್ಯ ಬೆಂಗಳೂರು ನಗರ ಜಿಲ್ಲೆಯೂ ಸೇರಿದಂತೆ 10 ಜಿಲ್ಲಾ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಲಭ್ಯವಿದೆ. ಈ ಸೇವೆಯನ್ನು ಮನೆಗಳಿಗೆ ವಿಸ್ತರಿಸಲು ಇಲಾಖೆ ಮುಂದಾಗಿದೆ. ಈಗಾಗಲೇ ಅಧಿಕಾರಿಗಳು ವಿವಿಧ ರಾಜ್ಯಗಳಲ್ಲಿ ಈ ಚಿಕಿತ್ಸೆಯ ಬಗ್ಗೆ ಅಧ್ಯಯನ ನಡೆಸಿದ್ದಾರೆ.ಕೇರಳದಲ್ಲಿ ಮನೆಯಲ್ಲಿಯೇ ಉಪಶಾಮಕ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಅದೇ ಮಾದರಿಯನ್ನು ಅನುಸರಿಸಲು ಇಲಾಖೆ ನಿರ್ಧರಿಸಿದೆ.

ADVERTISEMENT

ಮೊದಲ ಹಂತದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಿಗೆ ಈ ಚಿಕಿತ್ಸೆಯನ್ನು ವಿಸ್ತರಿಸಲಾಗುತ್ತದೆ. ಅಲ್ಲಿಯೇ ರೋಗಿಯ ಕುಟುಂಬದ ಸದಸ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ಉಪಶಾಮಕ ಚಿಕಿತ್ಸೆ ಅಗತ್ಯ ಇರುವವರಮನೆಗೆ ತೆರಳಿ, ಆರೈಕೆ ಮಾಡಲಿದ್ದಾರೆ.

‘ಶೇ 63 ರಷ್ಟು ರೋಗಿಗಳು ಅಸಾಂಕ್ರಾಮಿಕ ರೋಗಗಳಿಂದಾಗಿಯೇ ಮರಣ ಹೊಂದುತ್ತಿದ್ದಾರೆ. ಅಸಾಂಕ್ರಾಮಿಕ ರೋಗಗಳ ಚಿಕಿತ್ಸಾ ಕಾರ್ಯಕ್ರಮ ಆರಂಭಿಸಿ 10 ವರ್ಷಗಳಾಗಿವೆ. 2030ರೊಳಗೆ ಅಕಾಲಿಕ ಮರಣದ ಪ್ರಮಾಣವನ್ನು ಮೂರನೇ ಒಂದರಷ್ಟು ಕಡಿಮೆ ಮಾಡಬೇಕು. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದು, ನಗರ ಪ್ರದೇಶದ ಜನತೆಗೆ ಈ ಚಿಕಿತ್ಸೆ ದೊರೆಯುತ್ತಿದೆ. ಆದರೆ, ಗ್ರಾಮೀಣ ಭಾಗದ ರೋಗಿಗಳು ಮನೆಯಲ್ಲಿಯೇ ನರಳಬೇಕಾಗಿದೆ. ಹಾಗಾಗಿ, ಸೇವೆ ವಿಸ್ತರಿಸಲು ಮುಂದಾಗಿದ್ದೇವೆ’ ಎಂದು ಇಲಾಖೆಯ ಉಪನಿರ್ದೇಶಕ ಡಾ. ರಂಗಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾಸಿಗೆಯಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಿರುವ ರೋಗಿಗಳು ಕುಟುಂಬಕ್ಕೆ ಹೊರೆ ಆಗಬಾರದು. ಈ ಚಿಕಿತ್ಸೆ ಉಚಿತವಾಗಿರುತ್ತದೆ’ ಎಂದರು.

‘ಕೇರಳದಲ್ಲಿ ಮನೆಯಲ್ಲೇ ಉಪಶಾಮಕ ಚಿಕಿತ್ಸೆ ನೀಡುವ ಕಾರ್ಯಕ್ರಮ ವಿಸ್ತರಿಸಲು ಸರ್ಕಾರಕ್ಕೆ ಸಂಘ–ಸಂಸ್ಥೆಗಳು ನೆರವಾಗಿವೆ. ಇದೇ ಮಾದರಿಯಲ್ಲಿ ನಮ್ಮಲ್ಲಿಯೂ ಸೇವೆ ವಿಸ್ತರಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.