ಮೈಸೂರು: ತಿ. ನರಸೀಪುರ ತಾಲ್ಲೂಕು ತಲಕಾಡಿನ ಪಂಚಲಿಂಗದರ್ಶನ ಮಹೋತ್ಸವದ ಪ್ರಮುಖ ಕಾರ್ಯಕ್ರಮ ಪಂಚಲಿಂಗ ದರ್ಶನ ಪೂಜಾ ಮಹೋತ್ಸವವು ಕಡೆ ಕಾರ್ತೀಕ ಸೋಮವಾರದ ಮುಂಜಾನೆ 4 30ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಶುರುವಾಯಿತು.
ಸೋಮವಾರ ನಸುಕಿನ 4.30ಕ್ಕೆ ಸಲ್ಲುವ ಶುಭ ಲಗ್ನವಾದ ವೃಶ್ಚಿಕ ಲಗ್ನದಲ್ಲಿ ಏಕ ಕಾಲದಲ್ಲಿ ಐದು ದೇಗುಲಗಳ ಪಂಚಲಿಂಗಗಳಿಗೂ ಮಹಾನ್ಯಾಸಪೂರ್ವಕ ರುದ್ರ ಅಭಿಷೇಕ ನೆರವೇರಿತು.
ಪ್ರಧಾನ ದೇಗುಲವಾದ ವೈದ್ಯನಾಥೇಶ್ವರನಿಗೆ ಆನಂದ್ ದೀಕ್ಷಿತ್ ನೇತೃತ್ವದಲ್ಲಿ ರುದ್ರ ಪಾರಾಯಣದೊಂದಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ನಡೆಯಿತು.
ಕಾರ್ತೀಕ ಮಾಸದಲ್ಲಿ ಐದು ಸೋಮವಾರಗಳು ಬಂದು, ಕಡೆಯ ಸೋಮವಾರ ಅಮಾವಾಸ್ಯೆ ಬಂದರೆ ಆ ದಿನ ಪಂಚಲಿಂಗ ದರ್ಶನ ಪೂಜಾ ಮಹೋತ್ಸವ ನಡೆಯುತ್ತದೆ. ಇದು ಮಾತ್ರವಲ್ಲದೇ ಅನುರಾಧಾ, ಜೇಷ್ಠಾ ಅಥವಾ ವಿಶಾಖಾ ನಕ್ಷತ್ರ ಗಳಲ್ಲಿ ಯಾವುದಾದರೊಂದು ನಕ್ಷತ್ರ ಬಂದು ಸೂರ್ಯ ಚಂದ್ರ ರಿಬ್ಬರೂ ವೃಶ್ಚಿಕ ಲಗ್ನದಲ್ಲಿ ಸೇರಿದಾಗ, ಆ ದಿನದ ಉಷಾ ಕಾಲದಲ್ಲಿ ಬರುವ ಕುಹೂ ಯೋಗ,ಅಥವಾ ಪದ್ಮಕ ಯೋಗವು ಅತ್ಯಂತ ಫಲಪ್ರದಾಯಕ ಕಾಲವಾಗಿರುತ್ತದೆ. ಈ ವೇಳೆ ಪಂಚಲಿಂಗ ದರ್ಶನದ ಪುಣ್ಯಕಾಲ ಎಂದು ದೇಗುಲದ ಪ್ರಧಾನ ಅರ್ಚಕ ಆನಂದ ದೀಕ್ಷಿತ್ ಪ್ರಜಾವಾಣಿಗೆ ತಿಳಿಸಿದರು.
ಈ ಪುಣ್ಯ ಕಾಲ ಪ್ರತಿ ಸಂವತ್ಸರದಲ್ಲಿ ಬರುವುದಿಲ್ಲ. 3 ರಿಂದ 14 ವರ್ಷದೊಳಗೆ ಒಮ್ಮೆ ಒಂದು ಸಂವತ್ಸರದಲ್ಲಿ ಬರುತ್ತದೆ. ಆ ಸಂವತ್ಸರದಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಜರುಗಲಿದೆ.ಪಂಚಲಿಂಗ ದರ್ಶನ ದಿನದಂದು ಭಕ್ತರು ಕಾವೇರಿ ನದಿಯಲ್ಲಿ ಮಿಂದು ಐದು ದೇವಾಲಯಗಳಿಗೂ ಭೇಟಿ ನೀಡಿ ಪಂಚಲಿಂಗ ದರ್ಶನ ಮಾಡಿ ಪುನೀತರಾಗುವುದು ವಾಡಿಕೆ.
ತಲಕಾಡಿನಲ್ಲಿ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಪಂಚಮುಖಗಳ ಶಿವನನ್ನುಅರ್ಕೇಶ್ವರ, ಮುಡುಕುತೊರೆ ಮಲ್ಲಿಕಾರ್ಜುನ, ಮರಳೇಶ್ವರ, ಪಾತಾಳೇಶ್ವರ, ವೈದ್ಯನಾಥೇಶ್ವರ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತಿದ್ದು, ಈಶಾನ ಮುಖವೇ ಶಿವನ ಪ್ರಧಾನ ಮುಖವಾದಕಾರಣ ವೈದ್ಯಾನಾಥೇಶ್ವರನಿಗೆ ಅಗ್ರ ಪೂಜೆ ಸಲ್ಲಿಸಲಾಗುತ್ತದೆ.
2013 ರಲ್ಲಿ ನಡೆದ ಪಂಚಲಿಂಗ ದರ್ಶನದ 10 ದಿನದ ಉತ್ಸವದಲ್ಲಿ ಲಕ್ಷ, ಲಕ್ಷ ಸಂಖ್ಯೆಯ ಭಕ್ತರು ರಾಜ್ಯವಲ್ಲದೇ ನೆರೆ ರಾಜ್ಯಗಳಿಂದಲೂ ಭಾಗವಹಿಸಿದ್ದರು.
ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶ ಲಭ್ಯವಾಗಿದ್ದು, ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯ ಮಾಡಿಸಿಕೊಂಡು ದರ್ಶನ ಮಾಡಲು ಸೂಚಿಸಲಾಗಿದೆ.
ಪಂಚಲಿಂಗ ದರ್ಶನದ ಪೂಜೋತ್ಸವ ವರ್ಚುವಲ್ ಮೂಲಕವೂ ನೇರ ಪ್ರಸಾರಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.