ADVERTISEMENT

ಅಧ್ಯಕ್ಷ– ಉಪಾಧ್ಯಕ್ಷರ ಅವಧಿ ಎರಡೂವರೆ ವರ್ಷಕ್ಕೆ ಇಳಿಕೆ

ಪಂಚಾಯತ್‌ ರಾಜ್‌ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 19:39 IST
Last Updated 18 ಮಾರ್ಚ್ 2020, 19:39 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಬೆಂಗಳೂರು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರ ಅವಧಿಯನ್ನು ಎರಡೂವರೆ ವರ್ಷಗಳಿಗೆ ಇಳಿಸುವುದೂ ಸೇರಿ ಕೆಲವು ಬದಲಾವಣೆ ಮಾಡಿರುವ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಮಸೂದೆ’ಯನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ಮಸೂದೆ ಮಂಡಿಸಿದರು. ಒಟ್ಟು 36 ತಿದ್ದುಪಡಿಗಳನ್ನು ಮಾಡಲಾಗಿದೆ.

ಪಂಚಾಯಿತಿ ಸದಸ್ಯ ಯಾವುದೇ ಯೋಜನೆ, ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವಾಗ ಅಧಿಕಾರ ಅಥವಾ ಪ್ರಾಧಿಕಾರ ದುರುಪಯೋಗ ಮಾಡಿ, ತಪ್ಪಿತಸ್ಥ ಎಂದು ಸಾಬೀತಾದರೆ ಸದಸ್ಯತ್ವದಿಂದ ಆರು ವರ್ಷಗಳು ಅನರ್ಹತೆಗೊಳಿಸಲಾಗುವುದು. ಈ ಹಿಂದೆ ಅನರ್ಹತೆ ಅವಧಿ ಮೂರು ವರ್ಷಗಳವರೆಗಿತ್ತು.

ADVERTISEMENT

ರಾಜ್ಯ ಚುನಾವಣಾ ಆಯೋಗವು ಪಂಚಾಯತ್‌ ಅವಧಿ ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಚುನಾವಣಾ ಅಧಿಸೂಚನೆ ಹೊರಡಿಸುವುದಕ್ಕೆ ಮುಂಚೆ 45 ದಿನಗಳಿಗೆ ಕಡಿಮೆ ಇಲ್ಲದಂತೆ ಸ್ಥಾನಗಳ ಮೀಸಲಾತಿ ಮತ್ತು ಚುನಾವಣಾ ವೇಳಾ ಪಟ್ಟಿ ಪ್ರಕಟಿಸಬೇಕು.

ತಿದ್ದುಪಡಿಯ ಪ್ರಮುಖ ಅಂಶಗಳು:

* ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ ಅವಧಿ ಐದು ವರ್ಷಗಳು ಇದ್ದದ್ದನ್ನು ಎರಡೂವರೆ ವರ್ಷಗಳಿಗೆ ಇಳಿಕೆ.

* ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿದ ದಿನದಿಂದ 15 ತಿಂಗಳ ಬಳಿಕ ಅವಿಶ್ವಾಸ ಮಂಡಿಸಬಹುದು. ಅದಕ್ಕೂ ಮೊದಲೇ ಅವಿಶ್ವಾಸ ಗೊತ್ತುವಳಿ ಮಂಡಿಸುವುದಕ್ಕೆ ಅವಕಾಶವಿಲ್ಲ. ಈ ಹಿಂದಿನ ಕಾಯ್ದೆ ಅನುಸಾರ, ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ವತಃ ರಾಜೀನಾಮೆ ನೀಡಿದರೆ ಮಾತ್ರ ಆ ಹುದ್ದೆಯಿಂದ ಬಿಡುಗಡೆ ಮಾಡಬಹುದಾಗಿತ್ತು. ದೈಹಿಕ ಅಥವಾ ಮಾನಸಿಕ ಅಶಕ್ತತೆ ಹೊಂದಿದ್ದಾನೆ ಎಂಬುದನ್ನು ಸಕ್ಷಮ ಪ್ರಾಧಿಕಾರ ಪ್ರಮಾಣ ಪತ್ರ ನೀಡಿದರೆ, ಕೇಂದ್ರ, ರಾಜ್ಯ ಅಥವಾ ಸಾರ್ವಜನಿಕ ಉದ್ಯಮಗಳಲ್ಲಿ ಸೇವೆಯಲ್ಲಿದ್ದರೆ ರಾಜೀನಾಮೆ ನೀಡಬೇಕಾಗುತ್ತಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷರು ತಮ್ಮ ಹುದ್ದೆಗಳ ಕರ್ತವ್ಯದ ಬಗ್ಗೆ ನಿರಂತರ ನಿರ್ಲಕ್ಷ್ಯ ತೋರಿದರೆ, ಆ ಬಗ್ಗೆ ವರದಿ ಪಡೆದು ಸರ್ಕಾರ ಅಂತಹ ವ್ಯಕ್ತಿಗಳನ್ನು ತೆಗೆದು ಹಾಕಲು ಅವಕಾಶ ನೀಡಲಾಗಿತ್ತು.

* ತಾಲ್ಲೂಕು ಪಂಚಾಯಿತಿಯಲ್ಲಿ ಅವಿಶ್ವಾಸ ಮಂಡಿಸಿದಾಗ ಆ ಪ್ರಕ್ರಿಯೆ ಪೂರ್ಣಗೊಳಿಸಲು ಡೆಪ್ಯುಟಿ ಕಮಿಷನರ್‌ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಹಂತದಲ್ಲಿ ಪ್ರಾದೇಶಿಕ ಆಯುಕ್ತರೇ ಅಧ್ಯಕ್ಷತೆ ವಹಿಸಬೇಕು.

* ಪಂಚಾಯಿತಿಗಳ ಚುನಾವಣೆಯಲ್ಲಿ ಮತದಾನ ಮುಕ್ತಾಯವಾಗುವುದಕ್ಕೆ ಮೊದಲು 48 ಗಂಟೆಗಳ ಅವಧಿಯಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಿಸಬೇಕು.

ಕೈಗಾರಿಕೆ ತೆರಿಗೆ ದರ ಪರಿಷ್ಕರಣೆ

ಕೈಗಾರಿಕಾ ಕಟ್ಟಡ ತೆರಿಗೆಯನ್ನೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಹಿಂದೆ ವಾಸದ ಕಟ್ಟಡಗಳ ಮೂಲಮೌಲ್ಯದ ಮೇಲೆ ಶೇ 0.05ಕ್ಕಿಂತ ಕಡಿಮೆ ಇಲ್ಲದ ಆದರೆ, ಶೇ 0.10ಕ್ಕಿಂತ ಹೆಚ್ಚಾಗಿರದಂತೆ ತೆರಿಗೆ ವಿಧಿಸಲಾಗಿತ್ತು. ವಾಣಿಜ್ಯ ಕಟ್ಟಡಕ್ಕೆಮೂಲಮೌಲ್ಯದ ಮೇಲೆ ಶೇ 0.20ಕ್ಕಿಂತ ಕಡಿಮೆ ಇಲ್ಲದ ಆದರೆ, ಶೇ 0.50 ಕ್ಕಿಂತ ಹೆಚ್ಚಾಗಿರದಂತೆ ತೆರಿಗೆ ವಿಧಿಸಲಾಗಿತ್ತು.ಅದನ್ನು ಮುಂದುವರಿಸಲಾಗಿದೆ.

ಆದರೆ, ಕೈಗಾರಿಕೆ, ಕಾರ್ಖಾನೆ, ಐ.ಟಿ. ಪಾರ್ಕ್‌, ಜವಳಿ ಪಾರ್ಕ್‌ಗಳಿಗೆ ಸ್ವತ್ರತಿನ ಮೂಲ ಮೌಲ್ಯದ ಮೇಲೆ ತೆರಿಗೆ ವಿಧಿಸುವ ಪದ್ಧತಿ ಕೈಬಿಟ್ಟು, ವರ್ಗೀಕರಣ ಮಾಡಿ ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ. ವಿಮಾನ ನಿಲ್ದಾಣ ಮತ್ತು ಕೈಗಾರಿಕಾ ಪ್ರದೇಶದಲ್ಲಿರುವ ಖಾಲಿ ಜಾಗಗಳಲ್ಲಿ ನೆಡುತೋಪುಗಳನ್ನು ಬೆಳೆಸಿದ್ದರೆ ಅದಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ.

ಕಟ್ಟಡಗಳ ಮೇಲಿನ ತೆರಿಗೆ (ವಾರ್ಷಿಕ) ಅತಿ ಸಣ್ಣ ಕೈಗಾರಿಕೆಗೆ ಶೇ0.40,ಮಧ್ಯಮ ಕೈಗಾರಿಕೆಗೆ ಶೇ0.50,ಬೃಹತ್‌ ಕೈಗಾರಿಕೆಗೆ ಶೇ0.60 ಮತ್ತುವಿಮಾನ ನಿಲ್ದಾಣ ರನ್‌ವೇ ಪ್ರದೇಶಕ್ಕೆ ಶೇ0.10ಸ್ವತ್ತಿನ ಪ್ರಧಾನ ಮೌಲ್ಯದ ಮೇಲೆ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.