ಬೆಂಗಳೂರು: ‘ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ’ ಎನ್ನುವದೇವೇಗೌಡರ ಹೇಳಿಕೆ ಬಗ್ಗೆ ಕಾಂಗ್ರೆಸ್ ನಾಯಕರಾದ ಡಾ.ಜಿ.ಪರಮೇಶ್ವರ, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಅವರು ಹಿರಿಯರು: ಪರಮೇಶ್ವರ
‘ದೇವೇಗೌಡರಿಂದ ನಾವು ಯಾವುದನ್ನೂ ಕಿತ್ತುಕೊಂಡಿಲ್ಲ. ಅವರು ಹಿರಿಯರು ಯೋಚನೆ ಮಾಡಿಯೇ ಮಾತಾಡಿರ್ತಾರೆ. ಅವರ ಹೇಳಿಕೆ ಬಗ್ಗೆ ನಾವು ಯೋಚಿಸ್ತೀವಿ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.
ದೇವೇಗೌಡರ ವಿಚಾರ ಗೊತ್ತಿಲ್ಲ: ಡಿಕೆಶಿ
‘ನಮ್ಮ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸರ್ಕಾರ ರಚಿಸಲು ನಾವೇ ಆಹ್ವಾನ ಕೊಟ್ಟಿದ್ದು. ಸರ್ಕಾರ ಉರುಳಿಸಲುಬಿಜೆಪಿಯವರು ಬೇಕಾದಷ್ಟು ಪ್ರಯತ್ನ ಮಾಡ್ತಾ ಇದ್ದಾರೆ. ಇಷ್ಟು ದಿನ ಯಡಿಯೂರಪ್ಪ ಬೀಳಿಸ್ತೀನಿ ಅಂತಿದ್ರು. ಈಗ ಬೀಳಿಸಲ್ಲ ಅಂತಿದ್ದಾರೆ. ದೇವೇಗೌಡರ ವಿಚಾರ ನನಗೆ ಏನೂ ಗೊತ್ತಿಲ್ಲ. ಅವರಿಗೂ ನಮಗೂ ಅಸಮಾಧಾನ ಏನೂ ಇಲ್ಲ. ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಯಾರೂ ತಲೆಕೆಡಿಸಿಕೊಳ್ಳೋದು ಬೇಡ. ನಮ್ಮ ಸರ್ಕಾರ ಸುಭದ್ರವಾದ ಸರ್ಕಾರ’ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಈಗ ಇದೆಲ್ಲಾ ಬೇಕಾ: ದಿನೇಶ್ ಗುಂಡೂರಾವ್
‘ಈ ಸರ್ಕಾರ ಸ್ಥಿರವಾಗಿರಬೇಕು. ಸರ್ಕಾರ ಉರುಳಿಸುವ ಬಿಜೆಪಿ ಪ್ರಯತ್ನಕ್ಕೆ ಯಶಸ್ಸು ಸಿಗಬಾರದು. ಸರ್ಕಾರ ಹೇಗೆ, ಯಾರ ಆಶೀರ್ವಾದದಿಂದ ರಚನೆಯಾಯ್ತು ಅನ್ನೋದು ಈಗ ಮುಖ್ಯ ಅಲ್ಲವೇ ಅಲ್ಲ. ಮುಖ್ಯಮಂತ್ರಿ ಈಗ ಗ್ರಾಮ ವಾಸ್ತವ್ಯಕ್ಕೆ ಹೋಗಿದ್ದಾರೆ. ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದೆ. ರಾಜ್ಯದ ಅಭಿವೃದ್ಧಿಗಾಗಿ ಈ ಸರ್ಕಾರ ಇರಬೇಕು’ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.