ADVERTISEMENT

ಏನು ನಡೆದಿದೆ ಎಂದು ಸಿ.ಎಂ, ಡಿಸಿಎಂ, ಹೈಕಮಾಂಡ್​​ಗೆ ಮಾತ್ರ ಗೊತ್ತು: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 8:32 IST
Last Updated 8 ಫೆಬ್ರುವರಿ 2026, 8:32 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: ‘ಏನು ನಡೆದಿದೆ ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಹೈಕಮಾಂಡ್​​ಗೆ ಮಾತ್ರ ಗೊತ್ತಿದೆ. ಹೈಕಮಾಂಡ್ ಸುಮ್ಮನೆ ಇದ್ದರೆ ನಾವು ಏನೆಂದು ಅರ್ಥ ಮಾಡಿಕೊಳ್ಳುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

‘ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಎಂಬುದು ತೀರ್ಮಾನ ಆಗಿರುವ ವಿಚಾರ’ ಎಂದು ಡಾ. ಯತೀಂದ್ರ ಹೇಳಿಕೆ ವಿಚಾರವಾಗಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಅದು ಅವರ ವೈಯಕ್ತಿಕ ಹೇಳಿಕೆ’ ಎಂದರು.

ADVERTISEMENT

‘ನಾವು ಹೈಕಮಾಂಡ್‌ನ್ನು ಅವಲಂಬಿಸಿದ್ದೇವೆ. ಅಧಿಕಾರ ಒಪ್ಪಂದ ಆಗಿದೆ ಎಂದು ಯಾರು ಹೇಳಿದ್ದು? ಹೈಕಮಾಂಡ್​​ನವರು ಹೇಳಿದ್ದಾರಾ? ಅದನ್ನು ಹೈಕಮಾಂಡ್ ಹೇಳಬೇಕು. ಅದರ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿರಬಹುದು. ಅದು ಅವರ ಅಭಿಪ್ರಾಯ. ಅವರಿಗೆ ಗೊತ್ತಿರುವ ವಿಚಾರ ನಮಗೆ ಗೊತ್ತಿಲ್ಲ’ ಎಂದರು.

‘ಒಪ್ಪಂದ ಆಗಿದ್ದರೆ ಹೈಕಮಾಂಡ್ ಹೇಳಬಹುದು ಅಥವಾ ಕ್ರಮ ತೆಗೆದುಕೊಳ್ಳಬಹುದು. ಹೈಕಮಾಂಡ್ ಏನೂ ಹೇಳದೆ, ಏನೂ ತೀರ್ಮಾನ ಮಾಡದೆ ನಮಗೆ ಕೇಳಿದರೆ ಪ್ರಯೋಜನ ಇಲ್ಲ‌. ಹೈಕಮಾಂಡ್​​ಗೆ ಏನು ಮಾಡಬೇಕು, ಯಾವ ರೀತಿ ನಿಭಾಯಿಸಬೇಕೆಂದು ಗೊತ್ತಿದೆ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡಬೇಕು. ಅನೇಕರು ಹೇಳಿಕೆಗಳನ್ನು ಕೊಡಬಹುದು. ಅವು ಹೇಳಿಕೆಗಷ್ಟೇ ಸೀಮಿತ. ಹೈಕಮಾಂಡ್ ಕರೆ ಬಂದರೆ ಮಾತ್ರ ಎಲ್ಲ ಇತ್ಯರ್ಥ ಆಗಲಿದೆ’ ಎಂದರು.

ಕೇಂದ್ರ-ರಾಜ್ಯ ಸೇರಿ ಮೆಟ್ರೊ ದರ ನಿರ್ಧಾರ : ಮೆಟ್ರೊ ಟಿಕೆಟ್ ದರ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ, ‘ಮೆಟ್ರೊ ದರ ಬಗ್ಗೆ ಪದೇ ಪದೇ ಗೊಂದಲ ಆಗುತ್ತದೆ. ಕೇಂದ್ರ, ರಾಜ್ಯ ಸೇರಿ ಮಾಡುವ ನಿರ್ಧಾರವಿದು. ಈಗ ದರ ಏರಿಕೆಗೆ ಕೇಂದ್ರ ತಡೆ ನೀಡಿದೆ. ಮುಂದೆ ಏನು ಮಾಡಬೇಕೆಂದು ಎರಡೂ ಕಡೆಯವರು ಚರ್ಚೆ ಆಗಿ ತೀರ್ಮಾನವಾಗುತ್ತದೆ. ದರ ನಿಗದಿ ಸಮಿತಿಗೆ ಸ್ವಾಯತ್ತತೆ ನೀಡಲಾಗಿದೆ’ ಎಂದು ಹೇಳಿದರು.

ಎಐ ಸಾಫ್ಟ್‌ವೇರ್ ಖರೀದಿ: ತಪ್ಪು, ದ್ವೇಷ ಸಂದೇಶಗಳ ನಿಯಂತ್ರಣ, ನಿಗಾಕ್ಕೆ ₹ 67 ಕೋಟಿ ವೆಚ್ಚದಲ್ಲಿ ಎಐ (ಕೃತಕ ಬುದ್ದಿಮತ್ತೆ) ತಂತ್ರಾಂಶ ಖರೀದಿ ವಿಚಾರವಾಗಿ ಮಾತನಾಡಿದ ಅವರು, ‘ಸೈಬರ್ ಅಪರಾಧ ಜಾಸ್ತಿ ಆಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಅವಲಂಬನೆ ಹೆಚ್ಚುತ್ತಿದೆ. ತಪ್ಪು, ದ್ವೇಷದ ಸಂದೇಶಗಳಿಂದ ಸಾವುಗಳಾಗುತ್ತಿವೆ. ಭಯೋತ್ಪಾದಕ ಚಟುವಟಿಕೆಗಳಿಗೂ ಪ್ರಚೋದನೆ ಆಗುತ್ತಿದೆ. ಇದನ್ನೆಲ್ಲ ನಿಯಂತ್ರಣ ಮಾಡುವ ಅಗತ್ಯವಿದೆ. ನಾವು ಏನೂ ಮಾಡುತ್ತಿಲ್ಲವೆಂದು ಜನ ಹೇಳುತ್ತಾರಲ್ಲವೇ? ಅದಕ್ಕಾಗಿ ಅಗತ್ಯ ತಯಾರಿ, ಸಾಫ್ಟ್‌ವೇರ್​​ಗಳು ಬೇಕು, ಹಣ ಖರ್ಚು ಮಾಡಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ₹ 200 ಕೋಟಿಯಿಂದ ₹300 ಕೋಟಿ ಖರ್ಚು ಮಾಡುತ್ತಿದ್ದಾರೆ. ಮೊಹಾಂತಿಯವರು ಇದಕ್ಕಾಗಿಯೇ ₹ 1 ಸಾವಿರ ಕೋಟಿಯ ಪ್ರಸ್ತಾವ ಸಲ್ಲಿಸಿದ್ದಾರೆ’ ಎಂದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಸಾದಿಕ್ ಪಾಷ ಮೃತಪಟ್ಟ ವಿಚಾರವಾಗಿ ಮಾತನಾಡಿದ ಅವರು, ‘ಈ ಬಗ್ಗೆ ತನಿಖೆ ಮಾಡಲು ಹೇಳಿದ್ದೇನೆ. ಏನು, ಯಾವ ಕಾರಣಕ್ಕೆ ಸಾವು ಸಂಭವಿಸಿದೆ ಎಂದು ವರದಿ ನೀಡಲಿದ್ದಾರೆ’ ಎಂದರು‌.

‘ಬಜೆಟ್​​ನಲ್ಲಿ ಗೃಹ ಇಲಾಖೆಯ ನಿರೀಕ್ಷೆ ಏನು’ ಎಂಬ ಪ್ರಶ್ನೆಗೆ, ‘ನಾವು ನೇಮಕಾತಿಗೆ ಅನುಮತಿ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಅಲ್ಲದೆ, ಸಂಚಾರಕ್ಕೆ ವಾಹನಗಳನ್ನು ಕೇಳಿದ್ದೇವೆ. 15 ವರ್ಷ ಆದ ವಾಹನಗಳನ್ನು ಬಳಸಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ, ಹಳೆ ವಾಹಗಳನ್ನು ತೆಗೆದು‌ ಹೊಸ ವಾಹನ ಖರೀದಿಗೆ ಹೇಳಿದ್ದೇವೆ. ಪೊಲೀಸ್ ಗೃಹ ಯೋಜನೆ ಸೇರಿದಂತೆ ಬೇರೆ ಬೇರೆ ಯೋಜನೆಗಳಿಗೆ ಹಣ ಕೇಳಿದ್ದೇವೆ. ಸೈಬರ್ ಅಪರಾಧ, ಡ್ರಗ್ಸ್ ತಡೆ ಸೇರಿ ಹೊಸ ವಿಚಾರಕ್ಕೆ ಒತ್ತುನೀಡಬೇಕೆಂದೂ ಮನವಿ ಮಾಡಿದ್ದೇವೆ’ ಎಂದೂ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.