ADVERTISEMENT

ಪಕ್ಷ ಕಟ್ಟುವವರು ಹುಚ್ಚರಿರಬಾರದು: ಜೋಶಿ ಲೇವಡಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 23:15 IST
Last Updated 25 ಡಿಸೆಂಬರ್ 2022, 23:15 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ    

ಧಾರವಾಡ: ‘ಪಕ್ಷ ಕಟ್ಟುವುದಕ್ಕೆ, ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಂವಿಧಾನ ಅವಕಾಶ ನೀಡಿದೆ. ಆದರೆ ಹಾಗೆ ಪಕ್ಷ ಕಟ್ಟುವವರು ಹಾಗೂ ಸ್ಪರ್ಧಿಸುವವರು ಹುಚ್ಚರಿರಬಾರದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟಾಂಗ್ ಕೊಟ್ಟರು.

ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ ಹೊಸ ಪಕ್ಷ ಸ್ಥಾಪನೆಯಿಂದ ಬಿಜೆಪಿಗೇನೂ ನಷ್ಟವಿಲ್ಲ. ಬಿಜೆಪಿ ತತ್ವ ಸಿದ್ಧಾಂತಗಳ ಮೇಲೆ ಚುನಾವಣೆ ಎದುರಿಸುತ್ತದೆ’ ಎಂದರು.

ನ್ಯಾಯಾಲಯದ ಆದೇಶದಂತೆ ತೆರವು

ADVERTISEMENT

‘ಹುಬ್ಬಳ್ಳಿಯ ಬೈರಿದೇವರಕೊಪ್ಪದ ದರ್ಗಾ ತೆರವು ಕುರಿತು ಕಾಂಗ್ರೆಸ್ ಮುಖಂಡರು ಅಪಸ್ವರ ಎತ್ತುತ್ತಿರುವುದು ಹಾಸ್ಯಾಸ್ಪದ. ಬಿಆರ್‌ಟಿಎಸ್ ಮಾರ್ಗ ನಿರ್ಧಾರವಾಗಿದ್ದೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ. ಆಗ ದರ್ಗಾ ಜಾಗವನ್ನು ರಕ್ಷಿಸಲು ಯೋಜನೆ ರೂಪಿಸದೇ, ಈಗ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದಾರೆ’ ಎಂದರು.

‘ಈ ಮಾರ್ಗಕ್ಕೆ 12 ದೇವಾಲಯ, ಒಂದು ಚರ್ಚ್‌ ತೆರವುಗೊಳಿಸಲಾಗಿದೆ. ಇದೀಗ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲಾಗಿದೆ. ಮುಸ್ಲೀಮರೂ ಯಾವುದೇ ಬೇಸರವಿಲ್ಲದೆ ದರ್ಗಾ ಸ್ಥಳಾಂತರಿಸಿದ್ದಾರೆ. ಆದರೆ ಇಂಥ ವಿಷಯಗಳನ್ನು ಬಿಜೆಪಿ ನಾಯಕರ ತಲೆಗೆ ಕಟ್ಟುವ ಚಾಳಿ ಕಾಂಗ್ರೆಸ್ ಮುಖಂಡರು ಬಿಡಬೇಕು’ ಎಂದರು.

‘ದರ್ಗಾ ತೆರವು ಮಾಡುವಂತೆ ಯಾವುದೇ ಸಚಿವರು ಹಾಗೂ ಶಾಸಕರು ಸೂಚಿಸಿಲ್ಲ. ಇದರಲ್ಲಿ ರಾಜ್ಯ ಸರಕಾರದ ಹಸ್ತಕ್ಷೇಪವೂ ಇಲ್ಲ. ರಾತ್ರಿ ದರ್ಗಾ ತೆರುವಿಗೆ ಸೂಚಿಸಿದ ಕೆಲ ಕಾಂಗ್ರೆಸ್ ಮುಖಂಡರೇ, ಮರುದಿನ ಬೆಳಗ್ಗೆ ತೆರವುವಾದಾಗ ಬೊಬ್ಬೆ ಹೊಡೆದರು. ಇಂಥ ನಾಯಕರ ಹೆಸರು ಬಹಿರಂಗಪಡಿಸಲ್ಲ’ ಎಂದು ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.