ಬೆಂಗಳೂರು: ವೈದ್ಯಕೀಯ ತುರ್ತು ಸಂದರ್ಭದಲ್ಲಿ ಸ್ವಯಂ ಪ್ರೇರಿತ ಪರವಾನಗಿ ಪಡೆದುಕೊಳ್ಳಲು ಪೇಟೆಂಟ್ ಕಾಯ್ದೆಯಲ್ಲಿರುವ ವಿನಾಯಿತಿ ಬಳಸಿಕೊಳ್ಳಲು ಔಷಧ ಕಂಪನಿಗಳನ್ನು ಪ್ರೋತ್ಸಾಹಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.
ಪೇಟೆಂಟ್ಗಳ ಪ್ರಧಾನ ನಿಯಂತ್ರಕರು, ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಎಸಿಎಂಆರ್) ಮತ್ತು ಭಾರತೀಯ ಪ್ರಧಾನ ಔಷಧ ನಿಯಂತ್ರಕರಿಗೂ ನೋಟಿಸ್ ನೀಡಲು ಆದೇಶಿಸಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರಿನ(ಐಐಎಂಬಿ) ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್. ಚಂದ್ರಶೇಖರ್ ಈ ಅರ್ಜಿ ಸಲ್ಲಿಸಿದ್ದಾರೆ. ’ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಕೋವಿಡ್ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಔಷಧ ಕಂಪನಿಗಳು ಪೇಟೆಂಟ್ ಕಾಯ್ದೆ 1970ರ ಸೆಕ್ಷನ್ 92ರ ಪ್ರಕಾರ ವಿನಾಯಿತಿ ಪಡೆಯಲು ಅವಕಾಶ ಇದೆ. ಇದನ್ನು ಪಡೆದುಕೊಳ್ಳುವಂತೆ ಔಷಧ ಕಂಪನಿಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು‘ ಎಂದು ಅರ್ಜಿದಾರರು ಕೋರಿದ್ದಾರೆ.
‘ಕೋವಿಡ್ ಲಸಿಕೆ ತಯಾರಿಕೆ ಮತ್ತು ವಿತರಣೆಯಲ್ಲಿನ ವೇಗವನ್ನು ಖಚಿತಪಡಿಸಿಕೊಳ್ಳಲು ಐಸಿಎಂಆರ್ಗೆ ನಿರ್ದೇಶನ ನೀಡಬೇಕು. 2021ರ ಆಗಸ್ಟ್ ವೇಳೆಗೆ ಇಡೀ ದೇಶದ ಜನರಿಗೆ ಲಸಿಕೆ ನೀಡಲು ಕಾರ್ಯತಂತ್ರ ರೂಪಿಸುವ ಅವಶ್ಯಕತೆ ಇದೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.