ADVERTISEMENT

ರಾಜ್ಯ–ಕೇಂದ್ರದ ವೈಖರಿಗೆ ಬೇಸತ್ತ ಮತದಾರ :ಡಿಕೆಶಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 19:32 IST
Last Updated 4 ನವೆಂಬರ್ 2020, 19:32 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌    

ಬೆಂಗಳೂರು: ‘ಜನರ ಸಂಕಷ್ಟಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸದಿರುವುದು, ಜನಪರ ಕೆಲಸ ಮಾಡದಿರುವುದು ಮತ್ತು ಸದ್ಯದ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ಹೆಚ್ಚಿನ ಮತದಾರರು ಉಪ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ನೆಲೆಸಿರುವ ವಿದ್ಯಾವಂತ ಮತದಾರರು ಸದ್ಯದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿ, ಯಾವ ಕಾರಣಕ್ಕೆ ಮತ ಹಾಕಬೇಕೆಂದು ಬೇಸರಗೊಂಡಿದ್ದಾರೆ’ ಎಂದರು.

‘ಮತ ಚಲಾಯಿಸುವಂತೆ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಮನವಿ ಮಾಡಿದರೂ ಮತ ಹಾಕಲು ಇಚ್ಛೆ ಇಲ್ಲದ್ದರಿಂದ ಅವರು ಮತಗಟ್ಟೆಗೆ ಬಂದಿಲ್ಲ. ಆದರೆ, ಮತದಾರರ ಮೇಲೆ ನಮಗೆ ವಿಶ್ವಾಸವಿದೆ. ಚುನಾವಣೆ ನಡೆದ ಎರಡೂ ಕ್ಷೇತ್ರಗಳಲ್ಲಿ ಇತರ ಪಕ್ಷಗಳ ಕಾರ್ಯಕರ್ತರು ನಮ್ಮನ್ನು (ಕಾಂಗ್ರೆಸ್‌) ಬೆಂಬಲಿಸಿದ್ದಾರೆ’ ಎಂದರು.

ADVERTISEMENT

‘ಚುನಾವಣಾ ಅಕ್ರಮಗಳ ಬಗ್ಗೆ ನಾವು ಕೊಟ್ಟ ಮಾಹಿತಿಗೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಚುನಾವಣಾ ಆಯೋಗ ಕಾರ್ಯಪ್ರವೃತ್ತವಾಗಿದೆ. ಅಕ್ರಮಗಳ ಕುರಿತ ದೂರಿನ ಸತ್ಯಾಸತ್ಯತೆ ಪರಿಶೀಲಿಸಿದ್ದಾರೆ. ಅದರ ಪರಿಣಾಮವೇನು ಎಂಬ ಬಗ್ಗೆ ಗೊತ್ತಿಲ್ಲ’ ಎಂದು ಹೇಳಿದರು.

‘ರಾಜಕಾರಣದಲ್ಲಿ ನನಗಿಂತ ಸಿದ್ದರಾಮಯ್ಯ ಅನುಭವಿ. ಆದರೆ, ನನ್ನ ಪ್ರಕಾರ, ಈ ಚುನಾವಣೆ ಕಾಂಗ್ರೆಸ್ ಪಕ್ಷದ ಗೆಲುವಾಗುತ್ತದೆ. ನಾವು ಹತ್ತು ಟೇಕ್ ತೆಗೆದುಕೊಳ್ಳಲು ಸಿನಿಮಾ ಮಾಡುತ್ತಿಲ್ಲ. ಅವರ ರೀತಿ ಕಟ್ ಆ್ಯಂಡ್ ಪೇಸ್ಟ್ ಮಾಡುವುದಿಲ್ಲ. ಮುನಿರತ್ನ ಗೆದ್ದರೆ ಕೇವಲ ಇಂಧನ ಖಾತೆ ಯಾಕೆ, ಮುಖ್ಯಮಂತ್ರಿ ಸ್ಥಾನ
ವನ್ನೇ ಪಡೆಯಲಿ’ ಎಂದ ಅವರು, ‘ಇದು ಕೇವಲ ಬಿಜೆಪಿ ಸರ್ಕಾರ ಅಲ್ಲ, ಕಾಂಗ್ರೆಸ್- ಬಿಜೆಪಿ ಸರ್ಕಾರ’ ಎಂದೂ ಗೇಲಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.