ADVERTISEMENT

ಕಾರ್ಮಿಕ ಕುಟುಂಬಕ್ಕೆ ಶಾಶ್ವತ ಕಾರ್ಯಕ್ರಮ

‘ಪ್ರಜಾವಾಣಿ’ ವರದಿ ಉಲ್ಲೇಖಿಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 13:03 IST
Last Updated 23 ಫೆಬ್ರುವರಿ 2020, 13:03 IST

ಮುಂಡಗೋಡ: ‘ಕಾರ್ಮಿಕ ಕುಟುಂಬಕ್ಕೆ ನಿಶ್ಚಿತ ಹಾಗೂ ಶಾಶ್ವತವಾದ ಕಾರ್ಯಕ್ರಮ ಕೊಡಲು ಮೊದಲ ಆದ್ಯತೆ ನೀಡುತ್ತೇನೆ. ಕಾರ್ಮಿಕ ಇಲಾಖೆ ಅನೇಕ ನಿಯಮಗಳಿಗೆ ತಿದ್ದುಪಡಿಗಳನ್ನು ತರುವ ಅಗತ್ಯವಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ’ ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದರು.

ಅವರು ತಾಲ್ಲೂಕಿನ ಮಳಗಿಯಲ್ಲಿ ಭಾನುವಾರ ನಡೆದ ಮೇದಾರ ಜನಾಂಗದ ಸಮಾವೇಶದಲ್ಲಿ ಮಾತನಾಡಿದರು. ‘ಕಾರ್ಮಿಕ ನಿಧಿ ಮೇಲೆ ಕಳ್ಳಗಣ್ಣು’ ಎಂಬ ದೊಡ್ಡ ಲೇಖನವನ್ನು ‘ಪ್ರಜಾವಾಣಿ’ ಪ್ರಕಟಿಸಿದ್ದು ಗಮನಿಸಿದ್ದೇನೆ. ರಾಜ್ಯವೇ ಗಮನಿಸಬಹುದಾದ ವರದಿ ಇದಾಗಿದೆ. ಕಾರ್ಮಿಕ ಇಲಾಖೆಯಲ್ಲಿ ₹ 8–10ಸಾವಿರ ಕೋಟಿ ಹಣವಿದೆ. ಇದರ ಸದ್ಬಳಕೆ ಆಗಬೇಕು, ಇಲಾಖೆಯ ಕಾರ್ಯಕ್ರಮಗಳು ಉಪಯೋಗವಾಗಬೇಕು ಎಂದು ವರದಿಯಲ್ಲಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.

‘ಕಾರ್ಮಿಕ ಇಲಾಖೆಯ ಅಧಿಕಾರ ವಹಿಸಿಕೊಡು 15 ದಿನಗಳಾಗಿವೆ. ಇಲಾಖೆಗೆ ಮತ್ತಷ್ಟು ಜೀವ ತುಂಬುವ ಕೆಲಸ ಮಾಡಲಾಗುವುದು. ಒಂದು ಮುಕ್ಕಾಲು ಕೋಟಿಗೂ ಹೆಚ್ಚು ಇರುವ ಬಡಕಾರ್ಮಿಕರ ಜೀವನಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತೇನೆ. ಈಗಾಗಲೇ ತಿದ್ದುಪಡಿ ಮೂಲಕ, ಅಗತ್ಯ ಭದ್ರತೆಯಡಿ ರಾತ್ರಿ ಪಾಳಿಯ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಗಿದೆ. ಬರಲಿರುವ ಬಜೆಟ್‌ನಲ್ಲಿ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಘೋಷಣೆ ಮಾಡಲಿದ್ದಾರೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.