ಬೆಂಗಳೂರು: ಮನೆಯ ಮುಂದಿನ ಗೇಟ್ ಎದುರು ಮಾತನಾಡುತ್ತಾ ನಿಂತಿದ್ದ ನಗರದ ಲಗ್ಗೆರೆ ನಿವಾಸಿ ಮೌನೇಶ್ ಎಂಬುವರಿಗೆ ಪಟಾಕಿ ತಗುಲಿದ್ದರಿಂದ ಕಣ್ಣಿನ ಗುಡ್ಡೆ ಆಚೆ ಬಂದಿದೆ.
‘ನನ್ನ ಪತಿ ಮನೆಯ ಗೇಟ್ ಎದುರು ಮಾತನಾಡುತ್ತ ನಿಂತಿದ್ದರು. ಆಗ ಅಚಾನಕ್ಕಾಗಿ ಪಟಾಕಿ ಬಂದು ಅವರ ಕಣ್ಣಿಗೆ ಬಡಿದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದೆವು. ಗುರುವಾರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ’ ಎಂದು ಮೌನೇಶ್ ಅವರ ಪತ್ನಿ ಮೀನಾಕ್ಷಿ ಹೇಳಿದರು.
‘ಅವರ ದೃಷ್ಟಿಗೆ ತೊಂದರೆ ಆಗಿಲ್ಲ. ಆದರೆ ಗಂಭೀರವಾದ ಗಾಯವಾಗಿದೆ’ ಎಂದು ಅವರು ಹೇಳಿದರು. ಮಿಂಟೊ ಆಸ್ಪತ್ರೆಯಲ್ಲಿ ಮೌನೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಮೌನೇಶ್ ಅವರ ಬಲಭಾಗದ ಕಣ್ಣಿನ ಗುಡ್ಡೆ ಪೂರ್ತಿ ಆಚೆ ಬಂದಿತ್ತು. ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಅವರಿಗೆ ದೃಷ್ಟಿ ಮರಳಿ ಬರುವ ಸಾಧ್ಯತೆ ಇದೆ’ ಎಂದು ಆಸ್ಪತ್ರೆಯ ನಿರ್ದೇಶಕಿ ಡಾ.ಬಿ.ಎಲ್.ಸುಜಾತಾ ರಾಥೋಡ್ ಹೇಳಿದರು.
ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಈವರೆಗೆ 33 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದರಲ್ಲಿ ಐವರಿಗೆ ಗಂಭೀರವಾದ ಗಾಯ ಆಗಿದೆ. ಬಾಲಕಿಯೊಬ್ಬಳು ಶಾಶ್ವತವಾಗಿ ಒಂದು ಕಣ್ಣನ್ನು ಕಳೆದುಕೊಂಡಿದ್ದಾಳೆ. ನಾರಾಯಣ ನೇತ್ರಾಲಯದಲ್ಲಿ 38 ಜನರು ಚಿಕಿತ್ಸೆ ಪಡೆದಿದ್ದರೆ, ಮೋದಿ ಐ ಕೇರ್ನಲ್ಲಿ ಐವರು ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಐದು ಮಂದಿ ಚಿಕಿತ್ಸೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.