ADVERTISEMENT

‘ಜನಸೇವಕ ಯೋಜನೆ’ ರಾಜ್ಯದಾದ್ಯಂತ ವಿಸ್ತರಣೆ: ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 19:30 IST
Last Updated 7 ಜನವರಿ 2021, 19:30 IST
ಎಸ್‌. ಸುರೇಶ್‌ಕುಮಾರ್‌
ಎಸ್‌. ಸುರೇಶ್‌ಕುಮಾರ್‌   

ಬೆಂಗಳೂರು: ‘ಸರ್ಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ‘ಜನಸೇವಕ ಯೋಜನೆ’ಯನ್ನು ಜ. 15ರಿಂದ ಬೆಂಗಳೂರಿನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತೆ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಚಿಂತಿಸಲಾಗಿದೆ’ ಎಂದು ಸಕಾಲ ಸಚಿವ ಸುರೇಶ್ ಕುಮಾರ್ ಹೇಳಿದರು.

ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳ ಶಾಸಕರ ಸಭೆ‌ಯನ್ನು ಗುರುವಾರ ನಡೆಸಿ ಸಹಕಾರ ಕೋರಿದ ಅವರು, ಸರ್ಕಾರದ ಈ‌ ಮಹತ್ವದ ಯೋಜನೆ ಅನುಷ್ಠಾನಗೊಳಿಸಲು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಈ ಬಾರಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೂ ‘ಜನಸೇವಕ’ ಯೋಜನೆ ವಿಸ್ತರಿಸಲಾಗುವುದು. ಖಾತಾ ವರ್ಗಾವಣೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಸೇವೆಗಳು, ಆಧಾರ್ ಕಾರ್ಡಿನಲ್ಲಿನ ದೋಷಗಳ ತಿದ್ದುಪಡಿ, ಕಂದಾಯ, ಪೊಲೀಸ್, ಆಹಾರ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಒಟ್ಟು 55 ಸೇವೆಗಳನ್ನು ಈ ಯೋಜನೆಯಡಿ ಒದಗಿಸಲಾಗುವುದು’ ಎಂದರು.

ADVERTISEMENT

ಇ–ಸ್ಟ್ಯಾಂಪ್ ಸೇವೆ: ‘ಮುದ್ರಾಂಕ ಇಲಾಖೆಯ ಇ–ಸ್ಟಾಂಪ್ ಮತ್ತು ಸಾರಿಗೆ ಇಲಾಖೆಯ ಸೇವೆಗಳನ್ನು ಕೂಡಾ ಈ ಯೋಜನೆಯಡಿಯಲ್ಲಿ ಶೀಘ್ರವೇ ತರಲಾಗುವುದು’ ಎಂದು ಅವರು ಹೇಳಿದರು.

ಜನಸೇವಕ ಯೋಜನೆಯ ಬಗ್ಗೆ ವಾಟ್ಸ್‌ಆ್ಯಪ್‌, ಫೇಸ್ ಬುಕ್, ಟ್ವಿಟರ್‌ನಂಥ ಸಾಮಾಜಿಕ‌ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವುದು, ಕ್ಷೇತ್ರ ವ್ಯಾಪ್ತಿಯಲ್ಲಿ ಸ್ತ್ರೀಶಕ್ತಿ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು, ವಿವಿಧ ಸಮುದಾಯ ಆಧಾರಿತ ಸಂಸ್ಥೆಗಳ ಜೊತೆ ಸಭೆ ನಡೆಸಿ ಪ್ರಚಾರಕ್ಕೆ ಅವಕಾಶ ಕಲ್ಪಿಸುವುದು ಸೇರಿದಂತೆ ಈ ಯೋಜನೆಯ ಅನುಷ್ಠಾನಕ್ಕೆ ಸಹಕರಿಸಬೇಕು’ ಎಂದು ಬೆಂಗಳೂರು ನಗರದ ಶಾಸಕರ ಬಳಿ ಸಚಿವರು ಮನವಿ ಮಾಡಿದರು.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಸತೀಶ್‌ ರೆಡ್ಡಿ, ಇ– ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.