ADVERTISEMENT

ಗಂಗಾವತಿಗೆ ಇಂದು ಪ್ರಧಾನಿ ಮೋದಿ

ಬಿಗಿ ಪೊಲೀಸ್ ಬಂದೋಬಸ್ತ್: ಎಸ್‌ಪಿಜಿ ಕಣ್ಗಾವಲು, ಮುಖ್ಯ ವೇದಿಕೆ ಸಮೀಪ ಹೆಲಿಪ್ಯಾಡ್

ಸಿದ್ದನಗೌಡ ಪಾಟೀಲ
Published 12 ಏಪ್ರಿಲ್ 2019, 9:33 IST
Last Updated 12 ಏಪ್ರಿಲ್ 2019, 9:33 IST
ಗಂಗಾವತಿಯ ರಾಯಚೂರು ರಸ್ತೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿರುವ ಸಮಾವೇಶಕ್ಕೆ ಸಿದ್ಧಗೊಳ್ಳುತ್ತಿರುವ ವೇದಿಕೆ
ಗಂಗಾವತಿಯ ರಾಯಚೂರು ರಸ್ತೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿರುವ ಸಮಾವೇಶಕ್ಕೆ ಸಿದ್ಧಗೊಳ್ಳುತ್ತಿರುವ ವೇದಿಕೆ   

ಕೊಪ್ಪಳ: ಬಳ್ಳಾರಿ, ರಾಯಚೂರು, ಕೊಪ್ಪಳ ಲೋಕಸಭಾ ಪ್ರಚಾರದ ನಿಮಿತ್ತ ಗಂಗಾವತಿಯಲ್ಲಿ ಶುಕ್ರವಾರ ಮಧ್ಯಾಹ್ನ 3ಕ್ಕೆ ಬಿಜೆಪಿ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಪ್ರಮುಖರು ಭಾಗವಹಿಸುವರು.

ನಗರದ ಹೊರವಲಯದಲ್ಲಿ ಬೃಹತ್ ಶಾಮಿಯಾನ ಹಾಕಲಾಗಿದೆ. ಮೂರು ಲೋಕಸಭಾ ಕ್ಷೇತ್ರಗಳಿಂದ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯ ಕರ್ತರು, ಮೋದಿ ಅಭಿಮಾನಿಗಳು ಪಾಲ್ಗೊಳ್ಳುವರು. ಪಾರ್ಕಿಂಗ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.24 ವಿಧಾನ ಸಭಾ ಕ್ಷೇತ್ರಗಳ ಜನರನ್ನು ಕರೆತರಲು ಪಕ್ಷದ ಮುಖಂಡರು ಸಿದ್ಧತೆ ಪೂರ್ಣಗೊಳಿಸಿದ್ದಾರೆ.

ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದು ನಂತರ ಪ್ರಧಾನಿ ಮೋದಿ ಅವರು ಹೆಲಿಕಾಪ್ಟರ್‌ನಲ್ಲಿ ಚಿಕ್ಕೋಡಿಗೆ ತೆರಳುವರು. ಮಧ್ಯಾಹ್ನ 3ಕ್ಕೆ ಗಂಗಾವತಿಗೆ ಬರುವರು. ಸಮಾವೇಶದ ಮುಖ್ಯ ವೇದಿಕೆ ಪಕ್ಕದಲ್ಲೇ ಹೆಲಿಪ್ಯಾಡ್ ನಿರ್ಮಿಸಲಾಗಿದೆ.

ADVERTISEMENT

ವಿಶೇಷ ಕಾರುಗಳು: ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲು ಗುಂಡು ನಿರೋಧಕ ಎರಡು ಕಪ್ಪು ಕಾರುಗಳು ಗಂಗಾವತಿಗೆ ತಲುಪಿದ್ದು, ಜನರಲ್ಲಿ ಕುತೂಹಲ ಕೆರಳಿಸಿವೆ.

ನಗರದ ಹೊರವಲಯದ ಕನಕಗಿರಿ ರಸ್ತೆ ಬಳಿಯ ಕೃಷಿ ವಿಸ್ತರಣಾ ಕೇಂದ್ರದ ಎದುರುಗಿನ 30 ಎಕರೆ ಪ್ರದೇಶದಲ್ಲಿ ಪ್ರಚಾರ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಬೃಹತ್ ಪೆಂಡಾಲ್ ಹಾಕಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಗೊಂದಲ ಆಗದಂತೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಕಾರ್ಯಕ್ರಮದ ಸಂಚಾಲಕರು, ಉಸ್ತುವಾರಿಗಳು ನಿಗಾ ವಹಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಶಾಸಕ ಜಗದೀಶ ಶೆಟ್ಟರ್, ಶ್ರೀರಾಮುಲು, ಮೂರು ಕ್ಷೇತ್ರಗಳ ಅಭ್ಯರ್ಥಿಗಳು, ನಾಲ್ಕು ಜಿಲ್ಲೆಯ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಸಮನ್ವಯಕಾರರು, ಸಂಚಾಲಕರು ವೇದಿಕೆ ಮೇಲೆ ಇರಲಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ತಿಳಿಸಿದ್ದಾರೆ.

ಬಿಗಿ ಬಂದೋಬಸ್ತ್: ಪೊಲೀಸ್, ರಕ್ಷಣಾ ಪಡೆಗಳು, ಎಸ್‍ಪಿಜಿ, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ಸ್ಥಳೀಯ ಪೊಲೀಸರು ಪಹರೆ ನಡೆಸಿದ್ದಾರೆ. ಮೋದಿ ಬರುವ, ನಿರ್ಗಮಿಸುವ ಸ್ಥಳಗಳ ಪರಿಶೀಲನೆ, ವೇದಿಕೆ, ಆಸನ ಸೇರಿದಂತೆ ಪೆಂಡಾಲ್ ಹಾಕಿರುವ ಕಡೆಗೆಲ್ಲ ಸೂಕ್ಷ್ಮ ಪರಿಶೀಲನೆ ನಡೆಸಲಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಯಾವುದೇ ಗೊಂದಲಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಕಾರ್ಯಕ್ರಮಕ್ಕೆ ಎಸ್ಪಿ, ಡಿಎಸ್‍ಪಿ, ಸಿಪಿಐ, ಪಿಎಸ್‍ಐ, ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳದವರನ್ನು ಕಾರ್ಯಕ್ರಮದ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ್ ತಿಳಿಸಿದ್ದಾರೆ.

***

ಕೊಪ್ಪಳ, ಬಳ್ಳಾರಿ, ರಾಯಚೂರು ಲೋಕಸಭಾ ಕ್ಷೇತ್ರಗಳಿಂದ 2 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸಮಾರಂಭಕ್ಕೆ ಬರುವರು.ವ್ಯವಸ್ಥೆ ಮಾಡಲಾಗಿದೆ.

-ಮೃತ್ಯುಂಜಯ ಜಿನಗಾ,ಕಾರ್ಯಕ್ರಮ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.