ADVERTISEMENT

ಕವಿ ಜರಗನಹಳ್ಳಿ ಶಿವಶಂಕರ್ ನಿಧನ 

​ಪ್ರಜಾವಾಣಿ ವಾರ್ತೆ
Published 5 ಮೇ 2021, 3:54 IST
Last Updated 5 ಮೇ 2021, 3:54 IST
ಕವಿ ಜರಗನಹಳ್ಳಿ ಶಿವಶಂಕರ್
ಕವಿ ಜರಗನಹಳ್ಳಿ ಶಿವಶಂಕರ್    

ಬೆಂಗಳೂರು: ಕವಿ ಹಾಗೂ ಚಿಂತಕ ಜರಗನಹಳ್ಳಿ ಶಿವಶಂಕರ್ (72) ಅವರು ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಕೋವಿಡ್ ಪೀಡಿತರಾಗಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮರಣ ಹೊಂದಿದ್ದಾರೆ. 1949 ರಲ್ಲಿ ಜರಗನಹಳ್ಳಿ ಯಲ್ಲಿ ಜನಿಸಿದ ಅವರು, ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದರು. ಬ್ಯಾಂಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅವರು, ಸ್ವಯಂ ನಿವೃತ್ತಿ ಪಡೆದ ಬಳಿಕವೂ ಸಾಹಿತ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು, ಸಾವಿರಕ್ಕೂ ಹೆಚ್ಚು ಹನಿಗವನಗಳನ್ನು ಬರೆದು ಪ್ರಕಟಿಸಿದ್ದಾರೆ. " ಮಳೆ ", “ಆಲಿಕಲ್ಲು”, “ದೇವರ ನೆರಳು” ಮೊದಲಾದ ಕವನ ಸಂಕಲಗಳು ಅವರ ಸಾಹಿತ್ಯ ಕೃಷಿಯ ಮಜಲುಗಳು. ಇವರ ಹನಿಗವನಗಳ ಸಂಕಲನ ‘ಝರಿ’ ಉರ್ದು, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೂ ಅನುವಾದಗೊಂಡಿವೆ.

ADVERTISEMENT

ಇವರ ಹನಿಗವನಗಳು ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.