ಬೆಂಗಳೂರು: ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ,ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಸ್ಲಂ ಭರತ್ ಎನ್ಕೌಂಟರ್ಗೆ ಬಲಿಯಾಗಿದ್ದಾನೆ.
ಗುಂಡೇಟು ತಿಂದು ಕುಸಿದು ಬಿದ್ದಿದ್ದ ಭರತ್ ನನ್ನು ಮೊದಲಿಗೆ ಸಪ್ತಗಿರಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಬಂಧಿಯಾಗಿದ್ದ ಭರತ್ನನ್ನು ಎರಡು ವಾಹನಗಳಲ್ಲಿ ಕರೆದೊಯ್ಯುತ್ತಿದ್ದ ವೇಳೆ ಆತನ ಸಹಚರರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಸಹಚರರು ಹೊಡೆದ ಗುಂಡು ಪೊಲೀಸ್ ವಾಹನಕ್ಕೆ ತಗುಲಿದೆ. ಬಳಿಕ, ಭರತ್ ಕಾರಿನಲ್ಲಿ ಪರಾರಿಯಾಗಿದ್ದಾನೆ.
ನಸುಕಿನ 5 ಗಂಟೆಗೆ ವಯರ್ ಲೆಸ್ ಮೂಲಕ ಸಿಕ್ಕಿದ ಮಾಹಿತಿ ಪ್ರಕಾರ ಹೆಸರುಘಟ್ಟ ಬಳಿ ಕಾರು ಗುರುತಿಸಲಾಗಿದೆ. ಬೆನ್ನಟ್ಟಿದ ರಾಜಗೋಪಾಲನಗರ ಠಾಣೆ ಇನ್ಸ್ಪೆಕ್ಟರ್, ಕಾರನ್ನು ಅಡ್ಡಗಟ್ಟಿದಾಗ ಭರತ್ ಮೂರು ಸುತ್ತು ಗುಂಡು ಹೊಡೆದಿದ್ದಾನೆ. ಒಂದು ಗುಂಡು ಇನ್ ಸ್ಪೆಕ್ಟರ್ ಅವರ ಹೊಟ್ಟೆಗೆ ತಗುಲಿದೆ. ಆದರೆ, ಅವರು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಯಾವುದೇ ಅಪಾಯ ಆಗಿಲ್ಲ. ಎರಡು ಗುಂಡು ಕಾರುಗಳ ಮೇಲೆ ಬಿದ್ದಿದೆ.
ಇನ್ನೊಬ್ಬ ಇನ್ ಸ್ಪೆಕ್ಟರ್ ಒಂದು ಗುಂಡು ಗಾಳಿಯಲ್ಲಿ ಹಾರಿಸಿ, ಎರಡು ಗುಂಡುಗಳನ್ನು ಭರತ್ ಮೇಲೆ ಹಾರಿಸಿದ್ದಾರೆ. ಗುಂಡು ತಗುಲಿದ ಭರತ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಆತ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ ಎಂದುಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.