ADVERTISEMENT

ಬಿಟ್ ಕಾಯಿನ್ ಹಗರಣ: ನಿರೀಕ್ಷಣಾ ಜಾಮೀನು ಕೋರಿ ಪೊಲೀಸ್ ಅಧಿಕಾರಿಗಳ ಅರ್ಜಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 14:32 IST
Last Updated 30 ಮಾರ್ಚ್ 2024, 14:32 IST
   

ಬೆಂಗಳೂರು: 'ಬಿಟ್ ಕಾಯಿನ್ ವರ್ಗಾವಣೆ, ಹ್ಯಾಕಿಂಗ್ ಮತ್ತು ಪಾಸ್‌ವರ್ಡ್ ಬದಲಾಯಿಸಿದ ಆರೋಪದಡಿ ತಲೆ ಮರೆಸಿಕೊಂಡಿರುವ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಕೆ. ಪೂಜಾರ್ ಮತ್ತು ಯಲಹಂಕ ಠಾಣೆ ಪೊಲೀಸ್ ಇನ್‌ಸ್ಟೆಕ್ಟರ್ ಎಸ್.ಆರ್. ಚಂದ್ರಧರ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅಂತೆಯೇ, ಮತ್ತೊಬ್ಬ ಪೊಲೀಸ್ ಇನ್‌ಸ್ಟೆಕ್ಟರ್ ಡಿ.ಎಂ.ಪ್ರಶಾಂತ್ ಬಾಬು ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.

ಪೂಜಾರ್ ಮತ್ತು ಚಂದ್ರಧರ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ಏಕಸದಸ್ಯ ನ್ಯಾಯಪೀಠ ಏಪ್ರಿಲ್ 1ರಂದು ವಿಚಾರಣೆ ನಡೆಸಲಿದೆ.

ADVERTISEMENT

ಎಫ್ಐಆರ್ ರದ್ದು ಕೋರಿ ಡಿ.ಎಂ.ಪ್ರಶಾಂತ್ ಬಾಬು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ನ್ಯಾಯಪೀಠ ಏಪ್ರಿಲ್ 18ಕ್ಕೆ ವಿಚಾರಣೆ ನಡೆಸಲಿದೆ.

‘ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿದ್ದ ಶ್ರೀಧರ್ ಪೂಜಾರ್, ಚಂದ್ರಧರ, ಲಕ್ಷ್ಮಿಕಾಂತಯ್ಯ ಮತ್ತು ಪ್ರಶಾಂತ್ ಬಾಬು ಸೇರಿದಂತೆ ಕೆಲವು ಅಧಿಕಾರಿಗಳು ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ರಾಬಿನ್ ಖಂಡೇಲ್ ವಾಲ ಅವರನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡು ಜಿಸಿಐಡಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂತೋಷ್ ಕುಮಾರ್ ನೆರವಿನಿಂದ ಹ್ಯಾಕಿಂಗ್, ಬಿಟ್ ಕಾಯಿನ್ ಗಳ ವರ್ಗಾವಣೆ ಮತ್ತು ಪಾಸ್ ವರ್ಡ್ ಬದಲಾವಣೆ ಮಾಡಿದ್ದಾರೆ‘ ಎಂಬ ಆರೋಪ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.