ಬೆಂಗಳೂರು: ರಾಘವೇಂದ್ರ ಔರಾದಕರ ವರದಿಯ ಶಿಫಾರಸಿನ ಅನುಸಾರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ನೂತನ ವೇತನ ಶ್ರೇಣಿ ಆಗಸ್ಟ್ 1ರಿಂದಲೇ ಪೂರ್ವಾನ್ವಯವಾಗಲಿದೆ.
‘ಕಷ್ಟ ಪರಿಹಾರ ಭತ್ಯೆ’ ಹೆಚ್ಚಿಸಬೇಕು ಎಂಬ ಪೊಲೀಸರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ,ಎಲ್ಲ ಶ್ರೇಣಿಯವರಿಗೆ ತಲಾ ₹1 ಸಾವಿರ ಕಷ್ಟ ಪರಿಹಾರ ಭತ್ಯೆ ಹೆಚ್ಚಳಮಾಡಿದೆ. ಇದರಿಂದಾಗಿ ಕಾನ್ಸ್ಟೆಬಲ್ಗಳಿಗೆ ₹3 ಸಾವಿರ ಹಾಗೂ ಇಲ್ಲಿಯವರೆಗೆ ಈ ಭತ್ಯೆ ಪಡೆಯದ ಇನ್ಸ್ಪೆಕ್ಟರ್ಗಳಿಗೆ ತಲಾ ₹1 ಸಾವಿರ ಭತ್ಯೆ ಸಿಗಲಿದೆ.
ಔರಾದಕರ ಶಿಫಾರಸು ಜಾರಿ ಮಾಡುವಾಗ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಅಳವಡಿಸಿಕೊಂಡಿದ್ದರಿಂದ ಸಿಬ್ಬಂದಿಗೆ ತಾರತಮ್ಯ ಆಗಿದೆ ಎಂಬ ಕೂಗೆದ್ದಿತ್ತು. ಆದೇಶ ತಡೆಹಿಡಿದಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ತಾರತಮ್ಯ ನಿವಾರಿಸಿ ಆದೇಶ ಹೊರಡಿಸಲು ಸೂಚಿಸಿದ್ದರು. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಸಭೆ ನಡೆದಿತ್ತು. ‘ಹೊಸದಾಗಿ ಕೆಲಸಕ್ಕೆ ಸೇರುವ ಪೊಲೀಸ್ ಕಾನ್ಸ್ಟೆಬಲ್ಗಳ ವೇತನ ₹ 30,427 ರಿಂದ ₹ 34,267ಕ್ಕೆ ಏರಿಕೆಯಾಗಲಿದೆ’ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
***
ಪೊಲೀಸ್ ಸಿಬ್ಬಂದಿಗೆ ಇದ್ದ ವೇತನ ತಾರತಮ್ಯ ನಿವಾರಣೆ ಮಾಡಲಾಗಿದೆ. ಅಗ್ನಿಶಾಮಕ ಹಾಗೂ ಬಂಧೀಖಾನೆ ಇಲಾಖೆ ಸಿಬ್ಬಂದಿಗೂ ಔರಾದಕರ ವರದಿ ಅನುಸಾರ ವೇತನ ಸಿಗಲಿದೆ.
–ಬಸವರಾಜ ಬೊಮ್ಮಾಯಿ, ಗೃಹ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.