ಉಡುಪಿ:ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಬಿಆರ್ ಲೈಫ್ ವೆಂಚರ್ಸ್ ಹಾಗೂ ರಾಜ್ಯ ಸರ್ಕಾರ ಮಾಡಿಕೊಂಡಿರುವ ಪಿಪಿಪಿ ಮಾದರಿಯ ಒಪ್ಪಂದ ಯಶಸ್ವಿಯಾಗಿದೆ. ಇದೇ ಮಾದರಿ ಜಾರಿಗೆ ಕೇಂದ್ರ ಸರ್ಕಾರ ಕೂಡ ಉತ್ಸುಕತೆ ತೋರಿದ್ದು, ಬಜೆಟ್ನಲ್ಲಿ ₹6,000 ಕೋಟಿ ಮೀಸಲಿಟ್ಟಿದೆ ಎಂದು ಬಿಆರ್ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆ ಜನರಲ್ ಮ್ಯಾನೇಜರ್ ಕುಶಾಲ್ ಶೆಟ್ಟಿ ತಿಳಿಸಿದರು.
ಸೋಮವಾರ ಆಸ್ಪತ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ‘ರಾಜ್ಯ ಸರ್ಕಾರದ ಜತೆಗೆ 30 ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದ್ದು, 2018, ಫೆ.5ರಂದು ಆಸ್ಪತ್ರೆ ಕಾರ್ಯಾರಂಭ ಮಾಡಿದೆ. 200 ಬೆಡ್ಗಳ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಆಬ್ದುಲ್ಲ ಆಸ್ಪತ್ರೆಯಲ್ಲಿ ಬಡವರು ಸೇರಿ ಎಲ್ಲ ವರ್ಗದ ಮಹಿಳೆಯರು, ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧೋಪಚಾರ ನೀಡಲಾಗುತ್ತಿದೆ’ ಎಂದರು.
ಸರ್ಕಾರದಿಂದ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಮಾತ್ರ ಪಡೆಯಲಾಗಿದ್ದು, ಆಸ್ಪತ್ರೆಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, 35 ತಜ್ಞ ವೈದ್ಯರು, 329 ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಆಸ್ಪತ್ರೆಯ ಸಂಪೂರ್ಣ ಖರ್ಚು ವೆಚ್ಚಗಳನ್ನು ಬಿಆರ್ ವೆಂಚರ್ಸ್ ಭರಿಸುತ್ತಿದೆ ಎಂದರು.
ಹೈಟೆಕ್ ಚಿಕಿತ್ಸೆ ಪಡೆಯಲು ಹೊರ ಜಿಲ್ಲೆಗಳಿಂದ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇದುವರೆಗೂ ಒಟ್ಟು 1,31,568 ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಕುಶಾಲ್ ಶೆಟ್ಟಿ ಅಂಕಿ ಅಂಶಗಳನ್ನು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.