ADVERTISEMENT

‘ಪ್ರಜಾವಾಣಿ ದಸರಾ ಸಂಗೀತೋತ್ಸವ’ಕ್ಕೆ ತೆರೆ

ಇನ್ನಾದರೂ ಸಂಗೀತ ಕೇಳಬೇಕು: ಪಂಡಿತ್ ರಾಜೀವ್ ತಾರಾನಾಥ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 20:07 IST
Last Updated 26 ಅಕ್ಟೋಬರ್ 2020, 20:07 IST
‘ಪ್ರಜಾವಾಣಿ’ ದಸರಾ ಸಂಗೀತೋತ್ಸವದ ಸಮಾರೋಪದಲ್ಲಿ ಸೋಮವಾರ ಪಂಡಿತ್ ರಾಜೀವ್ ತಾರಾನಾಥ್ ಅವರು ಸರೋದ್ ನುಡಿಸಿದರು. ಭೀಮಾಶಂಕರ ಬಿದನೂರು ತಬಲಾ ಸಾಥ್ ನೀಡಿದರೆ, ಪ್ರೊ.ಸಿ.ನಾಗಣ್ಣ ನಿರೂಪಣೆ ಮಾಡಿದರು
‘ಪ್ರಜಾವಾಣಿ’ ದಸರಾ ಸಂಗೀತೋತ್ಸವದ ಸಮಾರೋಪದಲ್ಲಿ ಸೋಮವಾರ ಪಂಡಿತ್ ರಾಜೀವ್ ತಾರಾನಾಥ್ ಅವರು ಸರೋದ್ ನುಡಿಸಿದರು. ಭೀಮಾಶಂಕರ ಬಿದನೂರು ತಬಲಾ ಸಾಥ್ ನೀಡಿದರೆ, ಪ್ರೊ.ಸಿ.ನಾಗಣ್ಣ ನಿರೂಪಣೆ ಮಾಡಿದರು   

ಮೈಸೂರು: ಪ್ರಜಾವಾಣಿ ದಸರಾ ಸಂಗೀತೋತ್ಸವ–2020 ನಿಮಿತ್ತ, ಮೈಸೂರಿನಿಂದ ಚಾಲನೆ ಪಡೆದ ಆನ್‌ಲೈನ್ ದಸರಾ ಸಂಗೀತೋತ್ಸವವು ಸೋಮವಾರ ಇಲ್ಲಿ ಸಮಾರೋಪಗೊಂಡಿತು.

‘ಕೊರೊನಾದಂಥ ಸಂಕಷ್ಟ ಸಮಯದಲ್ಲಿ, ಸಂಗೀತವು ನೊಂದ ಮನಸ್ಸಿಗೆ ಔಷಧವಾಗಬಲ್ಲುದು’ ಎಂಬ ಆಶಯದೊಂದಿಗೆ ಅ. 17ರಂದು ಸಂಗೀತೋತ್ಸವಕ್ಕೆ ಪಂಡಿತ್ ರಾಜೀವ್ ತಾರಾನಾಥ್ ಚಾಲನೆ ನೀಡಿದ್ದರು.

ಅಂದಿನಿಂದ 10 ದಿನಗಳ ಕಾಲ, ಖ್ಯಾತ ಸಂಗೀತಗಾರರ ಗಾಯನ ಹಾಗೂ ವಾದ್ಯಸುಧೆಯ ರಸದೌತಣವನ್ನು ಒದಗಿಸಿದ ಉತ್ಸವಕ್ಕೆ ಸೋಮವಾರ ರಾಜೀವ್‌ ತಾರಾನಾಥ್ ಅವರೇ ‘ಭೈರವಿ’ ರಾಗದಲ್ಲಿ ಸರೋದ್ ನುಡಿಸುವ ಮೂಲಕ ತೆರೆ ಎಳೆದರು. ಭೀಮಾಶಂಕರ ಬಿದನೂರು ಅವರು ತಬಲಾ ಸಾಥ್ ನೀಡಿದರು.

ADVERTISEMENT

ಕಾರ್ಯಕ್ರಮ ನಿರೂಪಿಸಿದ ಲೇಖಕ ಸಿ. ನಾಗಣ್ಣ, ‘ಪ್ರಜಾವಾಣಿಯು ಕೋವಿಡ್‌ ಸಮಯದಲ್ಲಿ ಕೈಗೊಂಡ ಆನ್‌ಲೈನ್ ದಸರಾ ಸಂಗೀತೋತ್ಸವವು ಚರಿತ್ರಾರ್ಹವಾದ ಸಾಧನೆ. 10 ದಿನಗಳಲ್ಲಿ ಸಂಗೀತದ ಸುಧೆಯು ಕಡಲಾಗಿ ಹರಿದಿದೆ. ನಿತ್ಯ 25ರಿಂದ 30 ಸಾವಿರ ಮಂದಿ ಇದನ್ನು ವೀಕ್ಷಿಸಿದ್ದಾರೆ. ಪಂಡಿತ್ ಪ್ರವೀಣ್ ಗೋಡಖಿಂಡಿ ಅವರ ವೇಣುವಾದನಕ್ಕೆ 1 ಲಕ್ಷಕ್ಕೂ ಅಧಿಕ ವೀಕ್ಷಕರಿದ್ದರು’ ಎಂದು ಹೇಳಿದರು.

ಪಂಡಿತ್ ರಾಜೀವ್ ತಾರಾನಾಥ್ ಮಾತನಾಡಿ, ‘ಹಾಥರಸ್‌ನಲ್ಲಿ ಏನಾಯಿತೆಂದು ಎಲ್ಲರಿಗೂ ಗೊತ್ತಿದೆ. ಇವನ ಮನೆ
ಸುಡು, ಅವನನ್ನು ಕೊಲ್ಲು ಎನ್ನುವುದನ್ನು ಬಿಡಬೇಕು. ಇನ್ನಾದರೂ ಸಂಗೀತ ಕೇಳಬೇಕು’ ಎಂದು ಕರೆ ನೀಡಿದರು.

‘ಇಂದಿನ ಸಾಂಸ್ಕೃತಿಕ ಬಡ ಸ್ಥಿತಿಯಲ್ಲಿ ಸಂಗೀತವನ್ನು ಇಡೀ ಜಗತ್ತಿಗೆ ಹೇಳಿಕೊಡುತ್ತೇವೆ. ನಾವು ಹೀಗೆ, ನಾವು ಹಾಗೆ ಎಂದು ಮಾತನಾಡಿದರೆ ಆಗುವುದಿಲ್ಲ. ಕೇಳುಗರು ತಲೆದೂಗಿದಾಗ ಅದು ಸಂಗೀತ, ಸಂಸ್ಕೃತಿ. ನಮ್ಮ ಸಂಸ್ಕೃತಿಯನ್ನು ನೋಡಿ ಎಲ್ಲರೂ ತಲೆದೂಗುತ್ತಾರೆ’ ಎಂದು ಹೇಳಿದರು.

‘ಕೊರೊನಾದಿಂದ ಕತ್ತಲೆ ಕವಿದಿದೆ. ‘ಪ್ರಜಾವಾಣಿ’ ಧೈರ್ಯ ಮಾಡಿ ಈ ಕತ್ತಲೆ ಕಾಲದಲ್ಲಿ ಸಂಗೀತ ಸರಣಿಯನ್ನು ಆಯೋಜಿಸಿ ಅದರಿಂದ ಸ್ವಲ್ಪವಾದರೂ ಬೆಳಕು, ತೃಪ್ತಿ ನೀಡುವ ‘ನಮ್ಮದು’ ಎಂಬ ಹೆಮ್ಮೆ ಉಳಿಸಿದೆ’ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.