ಬೆಂಗಳೂರು: ಕ್ವಿಜ್ ಸ್ಪರ್ಧೆಯಲ್ಲಿ ಫೈನಲ್ವರೆಗೂ ಬಂದು ಕಡೇ ಹಂತದಲ್ಲಿ ಪ್ರಶಸ್ತಿ ಕೈ ತಪ್ಪಿದ ವಿದ್ಯಾರ್ಥಿಗಳಲ್ಲಿ ಸೋಲಿನ ಕಹಿ ಕಾಣಲಿಲ್ಲ. ಬದಲಿಗೆ, ಅವರ ಕಣ್ಣುಗಳಲ್ಲಿ ಮುಂದಿನ ಬಾರಿ ಗೆಲುವಿನ ಕನಸು ಕಾಣುತ್ತಿತ್ತು.
‘ಹಲವು ಪ್ರಶ್ನೆಗಳಿಗೆ ನಮಗೆ ಉತ್ತರ ಗೊತ್ತಿತ್ತು. ಆದರೆ, ಅದನ್ನು ಚುರುಕಾಗಿ ಬಜರ್ ಒತ್ತಿ ಉತ್ತರ ಹೇಳುವುದರಲ್ಲಿ ಸೋತೆವು. ಇಲ್ಲಿ ವೈವಿಧ್ಯಮಯ ವಿಷಯಗಳ ಕುರಿತು ಪ್ರಶ್ನೆ ಕೇಳಲಾಯಿತು. ಮುಂದಿನ ಬಾರಿ ಖಂಡಿತ ಇನ್ನು ಹೆಚ್ಚಿನ ತಯಾರಿ ಮಾಡಿಕೊಂಡು ಬರುತ್ತೇವೆ. ಸಾಹಿತ್ಯ ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆಯೂ ಕಲಿಯಬೇಕಿದೆ’ ಎನ್ನುತ್ತಾರೆ ಏಳನೇ ಸ್ಥಾನಗಳಿಸಿದ ವಿಜಯಪುರದ ಆಕ್ಸಫರ್ಡ್ ಶಾಲೆಯ ಯೋಗೇಶ್.
‘ಕ್ವಿಜ್ಗಾಗಿ ಸಾಮಾನ್ಯ ಜ್ಞಾನ ಪುಸ್ತಕಗಳನ್ನು ಓದಿಕೊಂಡಿದ್ದೆವು. ಆದರೆ, ಇಲ್ಲಿ ನಮ್ಮ ಊಹೆಗೂ ಮೀರಿ ಬೇರೆ ಬೇರೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು. ನಮ್ಮ ತಯಾರಿಯಲ್ಲಿ ಕೊರತೆ ಇದೆ. ಫೈನಲ್ವರೆಗೂ ಬಂದು ಗೆಲ್ಲಲಾಗಲಿಲ್ಲ ಎಂಬ ಬೇಸರ ಇದೆ. ಆದರೆ, ಈ ಬಾರಿ ಕೆಲ ವಿಷಯಗಳನ್ನು ಕಲಿತುಕೊಂಡಿದ್ದೇವೆ. ಇದು ಭವಿಷ್ಯದಲ್ಲಿ ಪ್ರಶಸ್ತಿ ಗೆಲ್ಲಲು ನೆರವಾಗಲಿದೆ’ ಎಂದುಹತ್ತನೇ ಸ್ಥಾನಗಳಿಸಿದ ತುಮಕೂರಿನ ವಿದ್ಯಾನಿಕೇತನ ಪ್ರೌಢ ಶಾಲೆಯ ನಾಗಭೂಷಣ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
‘ನಾವು ಹೆಚ್ಚು ಚುರುಕಾಗಿರಬೇಕಿತ್ತು’ಎಂದುಒಂಭತ್ತನೇ ಸ್ಥಾನಗಳಿಸಿದ ರಾಯಚೂರಿನ ಸಿಂಧನೂರಿನ ಎಂ.ಡಿ.ಎನ್ ಫ್ಯೂಚರ್ ಶಾಲೆಯ ಶ್ರೇಯಸ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.