ADVERTISEMENT

ಪ್ರಜಾವಾಣಿ ‘ಯುವ ಸಾಧಕ’ ಶಾಂತಪ್ಪ ಕುರುಬರಗೆ ಯುಪಿಎಸ್‌ಸಿಯಲ್ಲಿ 644ನೇ ರ್‍ಯಾಂಕ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 12:00 IST
Last Updated 16 ಏಪ್ರಿಲ್ 2024, 12:00 IST
<div class="paragraphs"><p>ಶಾಂತಪ್ಪ ಕುರುಬರ</p></div>

ಶಾಂತಪ್ಪ ಕುರುಬರ

   

ಕುರುಗೋಡು (ಬಳ್ಳಾರಿ): ಪ್ರಜಾವಾಣಿಯ ‘ಯುವ ಸಾಧಕ’ ಪ್ರಶಸ್ತಿಗೆ ಪಾತ್ರರಾಗಿದ್ದ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಹೊಸ ಗೆಣಿಕೆಹಾಳು ಗ್ರಾಮದ ಯುವಕ ಶಾಂತಪ್ಪ ಕುರುಬರ ಅವರು 2023ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಸಿಎಸ್‍ಸಿ)ದ ಪರೀಕ್ಷೆಯಲ್ಲಿ ದೇಶಕ್ಕೆ 644ನೇ ರ್‍ಯಾಂಕ್‌ ಪಡೆದಿದ್ದಾರೆ. 

ಶಾಂತಪ್ಪ ಅವರು 2016ರಲ್ಲಿ ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿದ್ದರು. ಉದ್ಯೋಗದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೂ ಅವರು ತಯಾರಿ ನಡೆಸಿದ್ದರು. 

ADVERTISEMENT

ತಮ್ಮ 8ನೇ ಪ್ರಯತ್ನದಲ್ಲಿ ಯುಪಿಎಸ್‌ಸಿಯಲ್ಲಿ ಯಶಸ್ವಿಯಾಗಿರುವ ಶಾಂತಪ್ಪ, ಮೊದಲ ಐದು ಪ್ರಯತ್ನಗಳಲ್ಲಿ ಸಂದರ್ಶನಕ್ಕೆ ಆಯ್ಕೆಯಾಗಿರಲಿಲ್ಲ. 6 ಮತ್ತು 7ನೇ ಪ್ರಯತ್ನದಲ್ಲಿ ಮುಖ್ಯಪರೀಕ್ಷೆ ಮತ್ತು ಸಂರ್ದಶನಕ್ಕೆ ಅರ್ಹತೆ ಪಡೆದಿದ್ದರು. ಆದರೆ ಆಯ್ಕೆಯಾಗಿರಲಿಲ್ಲ. 8ನೇ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. 

ಎಸ್ಸೆಸ್ಸೆಲ್ಸಿಯಲ್ಲಿ ಸಾಮಾನ್ಯ ವಿದ್ಯಾರ್ಥಿ

ಶಾಂತಪ್ಪ ಅವರು ಕುರುಗೋಡಿನ ಗೆಣಿಕೆಹಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದಿದ್ದರು. ಬಳ್ಳಾರಿ ಸರ್ಕಾರಿ ಮುನ್ಸಿಪಲ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಮತ್ತು ಬಳ್ಳಾರಿ ವೀರಶೈವ ಕಾಲೇಜಿನಲ್ಲಿ ಬಿಎಸ್ಸಿ ಶಿಕ್ಷಣ ಪಡೆದಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಮೊದಲ ಪ್ರಯತ್ನ ಮತ್ತು ಪಿಯುಸಿ ಎರಡನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದರು. ಬಿಎಸ್ಸಿಯಲ್ಲಿ ಶೇ 78ರಷ್ಟು ಅಂಕಪಡೆದಿದ್ದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅವರಿಗೆ  ಸ್ಪೂರ್ತಿಯಾಗಿತ್ತು. 

ಪ್ರಜಾವಾಣಿ ಯುವ ಸಾಧಕ

ಪ್ರಜಾವಾಣಿ ವತಿಯಿಂದ 2019ರಲ್ಲಿ ನೀಡಿದ್ದ ‘ಯುವ ಸಾಧಕ’ ಪ್ರಶಸ್ತಿ ಮತ್ತು ಡೆಕ್ಕನ್‍ ಹೆರಾಲ್ಡ್ ವತಿಯಿಂದ 2022ರಲ್ಲಿ ನೀಡಿದ್ದ ‘ಚೇಂಜ್‍ಮೇಕರ್’ ಪ್ರಶಸ್ತಿಗೆ ಶಾಂತಪ್ಪ ಪಾತ್ರರಾಗಿದ್ದರು. 

2019-20ರ ಕೋವಿಡ್‌ ಸಮಯದಲ್ಲಿ ಕರ್ತವ್ಯದ ಮಧ್ಯೆಯೂ ಕೊಳಗೇರಿ ನಿವಾಸಿಗಳ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಅವರ ಈ ಕಾರ್ಯ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.