ತುಮಕೂರು: ಮಧುಗಿರಿ ಜೆಡಿಎಸ್ ಶಾಸಕ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಂ.ವಿ.ವೀರಭದ್ರಯ್ಯ ಅವರು ಸಂಸದ ಪ್ರಜ್ವಲ್ ರೇವಣ್ಣ ಕಾಲುಮುಟ್ಟಿ ನಮಸ್ಕರಿಸಲು ಯತ್ನಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಶಿರಾ ತಾಲ್ಲೂಕಿನ ಬುವನಹಳ್ಳಿಯಲ್ಲಿ ಶಾಸಕ ಬಿ.ಸತ್ಯನಾರಾಯಣ ಪುಣ್ಯತಿಥಿ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ಪ್ರಜ್ವಲ್ ಅವರನ್ನು ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಸ್ವಾಗತಿಸಿದರು. ಈ ವೇಳೆ ಅಲ್ಲಿಗೆ ಬಂದ ವೀರಭದ್ರಯ್ಯ ಅವರು ಪ್ರಜ್ವಲ್ ಕಾಲು ಮುಟ್ಟಲು ಬಾಗಿದರು. ಆಗ ಪ್ರಜ್ವಲ್ ‘ಚೆನ್ನಾಗಿದ್ದೀರ ಅಣ್ಣ’ ಎಂದು ಅವರ ಜತೆ ಮಾತನಾಡುತ್ತ ತೆರಳಿದರು.
ಪ್ರಜ್ವಲ್ ವಯಸ್ಸು 30 ವರ್ಷ, ವೀರಭದ್ರಯ್ಯ ಅವರ ವಯಸ್ಸು 65 ವರ್ಷ. ಮಗನ ಪ್ರಾಯದ ಸಂಸದರ ಕಾಲಿಗೆ ಬೀಳಲು ಮುಂದಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದಿವೆ.
‘ಗೌಡರ ಕುಟುಂಬದವರು ವೀರಭದ್ರಯ್ಯ ಅವರನ್ನು ದೂರ ಇಟ್ಟಿದ್ದಾರೆ. ಇದೀಗ ಅವರನ್ನು ಮೆಚ್ಚಿಸಲು ಪ್ರಜ್ವಲ್ ಕಾಲಿಗೆ ಬಿದ್ದಿದ್ದಾರೆ. ಇದು ಮಧುಗಿರಿ ತಾಲ್ಲೂಕಿನ ಜನರು ತಲೆ ತಗ್ಗಿಸುವ ವಿಚಾರ’ ಎಂದು ತುಮಕೂರು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ನಾಗೇಶ್ ಬಾಬು ಬೇಸರ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.