ADVERTISEMENT

ಪ್ರಸಾದ ತಯಾರಿಗೆ ಮಾನದಂಡ: ಧಾರ್ಮಿಕ ಸಂಸ್ಥೆಗಳಿಂದ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 16:47 IST
Last Updated 12 ಡಿಸೆಂಬರ್ 2018, 16:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ದೇವಸ್ಥಾನಗಳಲ್ಲಿ ಭಕ್ತರಿಗೆ ನೀಡುವ ಪ್ರಸಾದ ತಯಾರಿಕೆಗೆ ಮಾನದಂಡ ನಿಗದಿಗೊಳಿಸಬೇಕು ಎಂಬ ಆಹಾರ ಸಂರಕ್ಷಣಾ ಹಾಗೂ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ ಪ್ರಸ್ತಾವಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಪ್ರಾಧಿಕಾರದ ಸಿಇಒ ಪವನ್‌ ಕುಮಾರ್ ಅಗರವಾಲ್‌ ತಿಳಿಸಿದರು.

‘ಆರಂಭದಲ್ಲಿ ಈ ಕುರಿತು ವಿರೋಧ ವ್ಯಕ್ತವಾಗಿತ್ತು. ಈ ವಿಚಾರದಲ್ಲಿ ಅವಸರ ಮಾಡಲಾಗದು. ಏಕೆಂದರೆ, ಇಲ್ಲಿ ಧರ್ಮ ಹಾಗೂ ಭಕ್ತಿಯ ವಿಚಾರ ಅಡಗಿದೆ. ತಂತ್ರಜ್ಞಾನದ ಅಳವಡಿಕೆ ದೊಡ್ಡ ವಿಚಾರವಲ್ಲ. ಆದರೆ, ಧಾರ್ಮಿಕ ಭಾವನೆಗಳಿಗೆ ತೊಡಕಾಗದಂತೆ ಮುತುವರ್ಜಿ ವಹಿಸುವುದಕ್ಕೆ ಗಮನ ನೀಡಬೇಕಿದೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ತಿರುಪತಿ ದೇವಸ್ಥಾನದಿಂದ ವಿರೋಧವಿತ್ತು. ಈಗ ಅವರೂ ನಮಗೆ ಸಹಮತ ವ್ಯಕ್ತ‍ಪಡಿಸಿದ್ದಾರೆ. ನಮ್ಮ ತಂಡವು ದೇವಸ್ಥಾನ ಆಡಳಿತ ಮಂಡಳಿಗಳ ಜತೆ ನಿರಂತರ ಮಾತುಕತೆಯಲ್ಲಿ ತೊಡಗಿದೆ. ಪ್ರಸಾದ ತಯಾರಿಯಲ್ಲಿ ಗುಣಮಟ್ಟ ಮಾನದಂಡ ಪಾಲಿಸುವಂತೆ ಮನವರಿಕೆ ಮಾಡಿದೆ. ಪ್ರಸಾದ ತಯಾರಿಗೆ ನೂರಾರು ವರ್ಷಗಳ ಇತಿಹಾಸವಿದೆ; ಅದಕ್ಕೆ ಯಾರೂ ಮೂಗು ತೂರಿಸಬಾರದು ಎಂಬ ಧಾರ್ಮಿಕ ಸಂಸ್ಥೆಗಳ ನಿಲುವಿಗೆ ನಾವು ಬದ್ಧರಾಗಿದ್ದೇವೆ. ನಾವು ಮಧ್ಯ ಪ್ರವೇಶ ಮಾಡುವುದಿಲ್ಲ. ಬದಲಿಗೆ, ಧಾರ್ಮಿಕ ಸಂಸ್ಥೆಗಳೇ ಗುಣಮಟ್ಟ ಪರೀಕ್ಷಿಸಿ ಭಕ್ತರಿಗೆ ನೀಡುವಂತೆ ಕೋರಿಕೆ ಸಲ್ಲಿಸಿದ್ದೇವೆ’ ಎಂದು ಹೇಳಿದರು.

ADVERTISEMENT

ಕರ್ನಾಟಕ ಶ್ಲಾಘನೀಯ:

ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸುವಲ್ಲಿ ಕರ್ನಾಟಕವು ಮುತುವರ್ಜಿ ವಹಿಸಿದೆ. ಯಾವುದೇಲೋಪಗಳಾಗದಂತೆ ಎಚ್ಚರವಹಿಸಿದೆ ಎಂದು ಶ್ಲಾಘಿಸಿದರು.

‘ಬಿಸಿಯೂಟ ಯೋಜನೆ ಜಾರಿಯಾದ ಸಮಯದಲ್ಲೇ ಕೇಂದ್ರ ಸರ್ಕಾರವು ಹಲವು ಗುಣಮಟ್ಟ ಮಾನದಂಡಗಳನ್ನು ಸಿದ್ಧಪಡಿಸಿತ್ತು. ಶಾಲೆಗಳ ಆಡಳಿತ ಮಂಡಳಿಗಳು ಅವನ್ನು ಸೂಕ್ತವಾಗಿ ಪಾಲಿಸಬೇಕು. ಈ ಶಾಲೆಗಳಲ್ಲಿ ಈ ಮಾನದಂಡಗಳ ‍ಪಾಲನೆಯಾಗುತ್ತಿರುವ ಕುರಿತು ನಿಗಾ ಇಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕುರಿತು ನಾವು ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದ್ದೇವೆ’ ಎಂದರು.

ಆಹಾರ ರಕ್ಷಣಾ ಅಧಿಕಾರಿಗಳ ನೇಮಕವಾಗಲಿ:

ದೇಶದಲ್ಲಿ ಆಹಾರ ಸಂರಕ್ಷಣಾ ನಿಯಮಗಳ ಪಾಲನೆಯಾಗಬೇಕಾದರೆ ಆಹಾರ ರಕ್ಷಣಾ ಅಧಿಕಾರಿಗಳ ನೇಮಕವಾಗಬೇಕು ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಸುಮಾರು 824 ಅಧಿಕಾರಿಗಳ ಕೊರತೆ ಇದೆ. ಕೆಲವು ರಾಜ್ಯಗಳಲ್ಲಿ ಆಹಾರ ರಕ್ಷಣಾ ಅಧಿಕಾರಿಗಳು ಕಡಿಮೆಯಿದ್ದಾರೆ. ಕೆಲವೆಡೆ ಉತ್ತಮ ಸಂಖ್ಯೆಯಲ್ಲಿದ್ದಾರೆ. ತಮಿಳುನಾಡಿನಲ್ಲಂತೂ ಅಗತ್ಯಕ್ಕಿಂತ ಅಧಿಕಾರಿಗಳಿದ್ದಾರೆ ಎಂದು ಉದಾಹರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.