ADVERTISEMENT

ಬಿಜೆಪಿ ಸೇರಲು ಪ್ರತಾಪಗೌಡರಿಂದ ಕಾದು ನೋಡುವ ತಂತ್ರ

​ಪ್ರಜಾವಾಣಿ ವಾರ್ತೆ
Published 29 ಮೇ 2019, 8:51 IST
Last Updated 29 ಮೇ 2019, 8:51 IST
   

ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ ಅವರು ಬಿಜೆಪಿ ಸೇರಿಸುವುದು ನಿಶ್ಚಿತವಾಗಿದ್ದರೂ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

29 ರ ಸಂಜೆ ಬೆಂಗಳೂರಿನಲ್ಲಿ ನಡೆಯುವ ಪಕ್ಷದ ಶಾಸಕಾಂಗ (ಸಿಎಲ್‌ಪಿ) ಸಭೆಯಲ್ಲಿ ಭಾಗವಹಿಸಲಿದ್ದು, ಆನಂತರ ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿಗೆ ಶಾಸಕರ ಬಹುಮತದ ಬೆಂಬಲ ದೊರೆಯುವುದು ನಿಶ್ಚಿತ ಎಂಬುದು ಮನವರಿಕೆಯಾದರೆ ಮಾತ್ರ ಪ್ರತಾಪಗೌಡ ಪಾಟೀಲ ಕಾಂಗ್ರೆಸ್‌ನಿಂದ ಹೊರಬರುವುದನ್ನು ಅಧಿಕೃತಗೊಳಿಸಲಿದ್ದಾರೆ ಎನ್ನಲಾಗಿದೆ.

ಈ ಮೊದಲು ಆಗಿದ್ದ ಮುಜುಗರ ಮರಕಳಿಸಬಾರದು ಎಂದು ಎಚ್ಚರಿಕೆಯನ್ನು ವಹಿಸಿದ್ದಾರೆ. ಬಿಜೆಪಿ ಸೇರ್ಪಡೆಯಾಗುವ ಅವರ ನಿರ್ಧಾರ ಅಚಲವಾಗಿದ್ದರೂ ಸಮಯಾವಕಾಶಕ್ಕಾಗಿ ಕಾಯುತ್ತಿದ್ದಾರೆ. ಸಿಎಲ್‌ಪಿ ಸಭೆಯ ಬಳಿಕ ಪ್ರತಾಪಗೌಡರು ಯಾವ ಕಡೆಗೆ ಚಿತ್ತ ಹರಿಸುತ್ತಾರೆ ಎಂಬುದು ಕ್ಷೇತ್ರದಲ್ಲಿರುವ ಬೆಂಬಲಿಗರಲ್ಲಿ ಕುತೂಹಲ ಮೂಡಿಸಿದೆ. ಬಹುತೇಕ ಬೆಂಗಳೂರಿನಿಂದ ಗೋವಾ ಅಥವಾ ಬಿಜೆಪಿ ನಾಯಕರು ಹೇಳಿದ ಕಡೆಗೆ ಶಾಸಕ ಪ್ರತಾಪಗೌಡ ತೆರಳಲಿದ್ದಾರೆ ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕ್ಷೇತ್ರದಾದ್ಯಂತ ಬೆಂಬಲಿಗರೊಂದಿಗೆ ಅವಲೋಕನ ಸಭೆಗಳನ್ನು ನಡೆಸಿದ್ದರು. ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲಿಗೆ ಏನು ಕಾರಣ ಎಂಬುದನ್ನು ಚರ್ಚಿಸಿದ್ದಾರೆ. ಇದೇ ವೇಳೆ, ಶಾಸಕರು ಬಿಜೆಪಿಗೆ ಸೇರ್ಪಡೆಯಾಗುವುದು ಉತ್ತಮ ಎನ್ನುವ ಸಲಹೆಗಳನ್ನು ಬೆಂಬಲಿಗರು ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.