ADVERTISEMENT

ಪ್ರವೀಣ್‌ ಹತ್ಯೆ: ಆರೋಪಿಗಳ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 4:18 IST
Last Updated 1 ಆಗಸ್ಟ್ 2022, 4:18 IST
ಪ್ರವೀಣ್‌ ನೆಟ್ಟಾರು
ಪ್ರವೀಣ್‌ ನೆಟ್ಟಾರು    

ಮಂಗಳೂರು/ ಸುಳ್ಯ: ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

‘ಆರೋಪಿಗಳ ಬಗ್ಗೆ ಖಚಿತವಾದ ಸುಳಿವುಗಳು ಸಿಕ್ಕಿವೆ. ಶೀಘ್ರವೇ ಬಂಧಿಸುತ್ತೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಾದ ಶಫೀಕ್ ಮತ್ತು ಜಾಕೀರ್ ಅವರನ್ನು ಕಸ್ಟಡಿಗೆ ಪಡೆದಿರುವಪೊಲೀಸರು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ADVERTISEMENT

ಹತ್ಯೆ ನಡೆದ ಸಂದರ್ಭದಲ್ಲಿ ಬೆಳ್ಳಾರೆಯಲ್ಲಿ ಬೀದಿ ದೀಪಗಳು ಬೆಳಗುತ್ತಿರಲಿಲ್ಲ. ಹಾಗಾಗಿ ಯಾವ ಸಿಸಿಟಿವಿ ಕ್ಯಾಮೆರಾದಲ್ಲೂ ಆರೋಪಿಗಳ ಚಹರೆ ಸಿಕ್ಕಿಲ್ಲ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆಯೇ,ಹತ್ಯೆಗೆ ಮೊದಲೇ ಸಂಚು ರೂಪಿಸಲಾಗಿದೆಯೇ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.

ಪ್ರವೀಣ್ ಅವರು ಬೆಳ್ಳಾರೆಯಲ್ಲಿ ನಡೆಸುತ್ತಿದ್ದ ಅಕ್ಷಯ ಫ್ರೆಷ್‌ ಚಿಕನ್‌ ಮಳಿಗೆಯಿಂದ 500 ಮೀ. ದೂರದಲ್ಲಿರುವ ಬಾಡಿಗೆ ಮನೆಯಲ್ಲಿ ಬಂಧಿತ ಆರೋಪಿಗಳಲ್ಲಿ ಒಬ್ಬರಾದ ಶಫೀಕ್‌ ವಾಸವಿದ್ದರು. ಆ ಮನೆಯಲ್ಲಿ ಕುಳಿತು ಪ್ರವೀಣ್ ಚಲನವಲನ ಗಮನಿಸಿ ಕೊಲೆಗೆ ಸಂಚು ರೂಪಿಸಿರುವ ಸಾಧ್ಯತೆ ಇರುವುದರಿಂದ ಮನೆಯ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ. ಈ ಮನೆ ಬೆಳ್ಳಾರೆ ಠಾಣೆಯಿಂದ 300 ಮೀಟರ್ ದೂರದಲ್ಲಿದೆ.ಮನೆ ಮಾಲೀಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.