ADVERTISEMENT

ಶಸ್ತ್ರಚಿಕಿತ್ಸೆ ಎಡವಟ್ಟು: ಬಾಣಂತಿಯರ ನರಳಾಟ

ತರಬೇತಿ ವೈದ್ಯರಿಂದ ಶಸ್ತ್ರಚಿಕಿತ್ಸೆ ಆರೋಪ: ಬಾಣಂತಿಯರಿಗೆ ಮರುಹೊಲಿಗೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 20:28 IST
Last Updated 14 ಮೇ 2022, 20:28 IST
   

ವಿಜಯಪುರ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಸಿಸೇರಿಯನ್ (ಶಸ್ತ್ರಚಿಕಿತ್ಸೆ) ಹೆರಿಗೆ ನಂತರ 18 ಬಾಣಂತಿಯರ ಹೊಲಿಗೆ ಬಿಚ್ಚಿಕೊಂಡಿದ್ದು, ನರಳುವಂತಾಗಿದೆ. ಕೆಲವರಿಗೆ ಬಾವು– ಕೀವಾಗಿದ್ದು, ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

‘ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ತರಬೇತಿ ವೈದ್ಯರಿಂದ ಶಸ್ತ್ರಚಿಕಿತ್ಸೆ ಮಾಡಿಸಿದ ಪರಿಣಾಮ ತೊಂದರೆಯಾಗಿದೆ’ ಎಂದು ಬಾಣಂತಿಯರು ಮತ್ತು ಅವರ ಪೋಷಕರು ಆರೋಪಿಸಿದರು.

ಸೋಂಕಿನಿಂದ ತೊಂದರೆ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎಲ್.ಲಕ್ಕಣ್ಣವರ, ಆಸ್ಪತ್ರೆಯಲ್ಲಿ ಒಂದೇ ಶಸ್ತ್ರಚಿಕಿತ್ಸಾ ಕೊಠಡಿ ಇದೆ. ನಿತ್ಯ ಬಿಡುವಿಲ್ಲದೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. 10 ದಿನಗಳ ಹಿಂದೆ ನಡೆದ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಸೋಂಕು ತಗುಲಿ ಕೆಲವರಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.

ADVERTISEMENT

ತೊಂದರೆಗೆ ಒಳಗಾಗಿರುವಬಾಣಂತಿಯರನ್ನು ತಜ್ಞ ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರಲ್ಲಿ ಅನೇಕ ಬಾಣಂತಿಯರು ರಕ್ತ ಹೀನತೆ (ಅನಿಮಿಕ್‌), ಹಿಮೊಗ್ಲೊಬಿನ್‌ ಕೊರತೆಯಿಂದ ಬಳಲುತ್ತಿರುವುದು ದೃಢಪಟ್ಟಿದೆ ಎಂದು ಹೇಳಿದರು.

‘ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. 11 ಬಾಣಂತಿಯರಿಗೆ ಮರುಹೊಲಿಗೆ ಹಾಕಲಾಗಿದೆ. ಇಬ್ಬರು ಬಾಣಂತಿಯರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐವರು ಬಾಣಂತಿಯರಿಗೆ ಸೋಮವಾರ ಮರು ಹೊಲಿಗೆ ಹಾಕಲಾಗುವುದು. ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಕ್ರಮಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.