ಸಿದ್ದರಾಮಯ್ಯ
ಬೆಳಗಾವಿ: ದೇಶದಲ್ಲಿ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಆಯೋಜಿಸಿರುವ 16 ದಿನಗಳ 'ಜನಾಕ್ರೋಶ ಯಾತ್ರೆ'ಯ ವಿರುದ್ಧವೂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಗೆ ಯಾರು ಹೊಣೆ? ಬೆಲೆ ಏರಿಕೆ ಸಂಬಂಧ ಬಿಜೆಪಿ ನಾಯಕರ ಉತ್ತರವೇನು? ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ನೇರ ಹೊಣೆ' ಎಂದು ಆರೋಪಿಸಿದ್ದಾರೆ.
'ಹಾಲಿನ ಬೆಲೆ ಏರಿಕೆಯಿಂದ ಸರ್ಕಾರದ ಖಜಾನೆಗೆ ಹಣ ಬರುತ್ತಿಲ್ಲ. ಅದು ನೇರವಾಗಿ ರೈತರಿಗೆ ಸೇರುತ್ತದೆ' ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
'ರೈತರಿಗೆ ಹಣ ನೀಡುವುದನ್ನು ಬಿಜೆಪಿ ಪ್ರತಿಭಟಿಸಿದರೆ ಅವರು ರೈತ ವಿರೋಧಿಗಳು' ಎಂದು ಸಿಎಂ ಟೀಕಿಸಿದ್ದಾರೆ.
'ಕೇಂದ್ರವು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ₹50 ಹೆಚ್ಚಿಸಿದೆ. ಆ ಮೂಲಕ ಜನ ಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗಿದೆ. ಬಿಜೆಪಿಗೆ ಪ್ರತಿಭಟಿಸುವ ಯಾವುದೇ ನೈತಿಕ ಹಕ್ಕು ಇಲ್ಲ. ಬಿಜೆಪಿಯಿಂದಲೇ ಬೆಲೆ ಏರಿಕೆಯಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಹೇಗಿತ್ತು ಎಂಬುದನ್ನು ಪರಿಶೀಲಿಸಿ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.