ಕಾರವಾರ: ಜಿಲ್ಲೆಯಲ್ಲಿ ಒಂದು ವಾರ ವ್ಯಾಪಿಸಿದಪ್ರವಾಹದಿಂದ ಆಸ್ತಿಪಾಸ್ತಿಗಳಿಗೆ ಒಟ್ಟು ₹ 418 ಕೋಟಿ ಹಾನಿಯಾಗಿದೆ ಎಂದು ವಿವಿಧ ಇಲಾಖೆಗಳು ಜಿಲ್ಲಾಡಳಿತಕ್ಕೆಪ್ರಾಥಮಿಕ ವರದಿ ಸಲ್ಲಿಸಿವೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗೀಲ್ ಈ ಕುರಿತು ಮಾಹಿತಿ ನೀಡಿದರು.
‘ಜಿಲ್ಲೆಯಲ್ಲಿ ಆ.1ರಿಂದ ಆ.12ರವರ ನಡುವೆ ಸರಾಸರಿ 95.8 ಸೆಂಟಿಮೀಟರ್ ಮಳೆಯಾಗಿದೆ. ಇದು ವಾಡಿಕೆಗಿಂತ ಶೇ 223ರಷ್ಟುಹೆಚ್ಚಾಗಿದೆ. 113 ಗ್ರಾಮಗಳು ಜಲಾವೃತವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. 6,200 ಜನರನ್ನುರಕ್ಷಿಸಲಾಗಿದೆ. ಪ್ರಸ್ತುತ 73 ಪರಿಹಾರ ಕೇಂದ್ರಗಳಲ್ಲಿ 8,561 ಜನರು ಆಶ್ರಯ ಪಡೆದಿದ್ದಾರೆ’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿ, ‘ಮುಂದಿನ 48 ಗಂಟೆಗಳಲ್ಲಿ ವಿದ್ಯುತ್, ಮೊಬೈಲ್ ಟವರ್ಗಳಿಗೆ ಮರು ಸಂಪರ್ಕ ಕೊಡುವ ಕೆಲಸಗಳು ಪೂರ್ಣಗೊಳ್ಳಲಿವೆ. ಆ.16ರಿಂದ ಬೆಳೆ ಸಮೀಕ್ಷೆ ನಡೆಸಲಾಗುವುದು’ ಎಂದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1,005 ಕಿ.ಮೀ ರಸ್ತೆ ಹಾಗೂ 89 ಸೇತುವೆ, ಮೋರಿಗಳು ಹಾಗೂ 38 ಕೆರೆಗಳು ಹಾನಿಯಾಗಿವೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.