ADVERTISEMENT

ಸಣ್ಣ ವಯಸ್ಸಿನಲ್ಲೇ ಅನ್ನದಾತರ ಯೋಚನೆ: ಪ್ರಧಾನಿ ಶ್ಲಾಘನೆ

ಆವಿಷ್ಕಾರ: ರಾಕೇಶ್ ಕೃಷ್ಣ ಅಭಿನಂದಿಸಿದ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:31 IST
Last Updated 25 ಜನವರಿ 2021, 19:31 IST
ಆವಿಷ್ಕರಿಸಿದ ಬಿತ್ತನೆ ಯಂತ್ರವನ್ನು ಪ್ರಧಾನಿ ಜೊತೆಗಿನ ಸಂವಾದದ ಬಳಿಕ ಪ್ರದರ್ಶಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಬನ್ನೂರಿನ ಕೆ. ರಾಕೇಶ್ ಕೃಷ್ಣ.
ಆವಿಷ್ಕರಿಸಿದ ಬಿತ್ತನೆ ಯಂತ್ರವನ್ನು ಪ್ರಧಾನಿ ಜೊತೆಗಿನ ಸಂವಾದದ ಬಳಿಕ ಪ್ರದರ್ಶಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಬನ್ನೂರಿನ ಕೆ. ರಾಕೇಶ್ ಕೃಷ್ಣ.   

ಮಂಗಳೂರು: ‘ಕೃಷಿ ಆಧುನೀಕರಣವು ದೇಶದ ಇಂದಿನ ಅಗತ್ಯ. ಇದನ್ನು ಸಣ್ಣ ವಯಸ್ಸಿನಲ್ಲಿ ಅರ್ಥ ಮಾಡಿಕೊಂಡು ಕೃಷಿಗೆ ತಂತ್ರಜ್ಞಾನದ ಜೋಡಣೆ ಮಾಡುತ್ತಿರುವ ರಾಕೇಶ್‌ ಕೃಷ್ಣ ಪ್ರಯತ್ನ ಶ್ಲಾಘನೀಯ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಬನ್ನೂರಿನ ಕೆ.ರಾಕೇಶ್ ಕೃಷ್ಣ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.

‘ಪ್ರಧಾನ ಮಂತ್ರಿ ಬಾಲ
ಪುರಸ್ಕಾರ –2021’ಕ್ಕೆ ಪಡೆದ ವಿದ್ಯಾರ್ಥಿಗಳ ಜೊತೆ ಪ್ರಧಾನಿ ಸೋಮವಾರ ವರ್ಚುವಲ್ ಸಂವಾದ ನಡೆಸಿದ್ದು, ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ರಾಕೇಶ್‌ ಕೃಷ್ಣ ಅವರು, ತಾಯಿ ದುರ್ಗಾರತ್ನ, ತಂದೆ ರವಿಶಂಕರ್‌ ನೆಕ್ಕಿಲ ಹಾಗೂ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಜೊತೆ ಪಾಲ್ಗೊಂಡಿದ್ದರು.

‘ಯಶಸ್ಸು ನಿಮ್ಮದಾಗಲಿ. ದೇಶದ ರೈತರ ನೆರವಿಗಾಗಿ ನಿಮ್ಮನ್ನು ಪ್ರೋತ್ಸಾಹಿಸಿದ ತಂದೆ–ತಾಯಿ ಮತ್ತು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಜ್ಞಾನದ ವಿದ್ಯಾರ್ಥಿಯಾಗಿ ಕೃಷಿ ಬಗ್ಗೆ ಯೋಚಿಸುತ್ತಿರುವುದು ಖುಷಿ ನೀಡಿದೆ’ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.

ADVERTISEMENT

‘ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಆಸಕ್ತಿ ಇತ್ತು. ತಂದೆ ಕೃಷಿಕರಾಗಿದ್ದು, ಕೃಷಿಯಲ್ಲಿ ಕಾರ್ಮಿಕರ ಕೊರತೆಯ ಅರಿವಿತ್ತು. ಅದಕ್ಕಾಗಿ ಆವಿಷ್ಕಾರದಲ್ಲಿ ತೊಡಗಿದೆ. ನಾನು ಆವಿಷ್ಕರಿಸಿದ ಯಂತ್ರವು ಶೇ 50ರಷ್ಟು
ಲಾಭದಾಯಕವಾಗಿದೆ. ಹಣ ಮತ್ತು ಸಮಯ ಉಳಿತಾಯ ಸಾಧ್ಯ. ಕೆಲವು ಕಂಪನಿಗಳು ನನ್ನನ್ನು ಸಂಪರ್ಕಿಸಿವೆ. ಆದರೆ, ಇನ್ನಷ್ಟು
ಅಭಿವೃದ್ಧಿ ಪಡಿಸಬೇಕಾಗಿದೆ. ನನಗೆ ಪ್ರೋತ್ಸಾಹ ನೀಡಿದ ಪೋಷಕರು ಹಾಗೂ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಮೋದಿ ಅವರ ಪ್ರಶ್ನೆಗಳಿಗೆ ರಾಕೇಶ್ ಕೃಷ್ಣ ಖುಷಿಯಿಂದ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.