ADVERTISEMENT

ಖಾಸಗಿ ಬಸ್‌ಗಳ ಮಾರ್ಗ ರಾಷ್ಟ್ರೀಕರಣಕ್ಕೆ ವಿರೋಧ

ಇಂದು ಪ್ರಾಧಿಕಾರದಲ್ಲಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 20:15 IST
Last Updated 22 ನವೆಂಬರ್ 2018, 20:15 IST
   

ಬೆಂಗಳೂರು: ‘ಸಮಗ್ರ ಪ್ರದೇಶ ಯೋಜನೆ’ (ಏರಿಯಾ ಸ್ಕೀಮ್) ಮುಖಾಂತರ ಖಾಸಗಿ ಬಸ್‌ಗಳ ರಾಷ್ಟ್ರೀಕರಣ ಕುರಿತ ಕರಡು ಅಧಿಸೂಚನೆಯ ಬಗ್ಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ನೇತೃತ್ವದ ವಿಚಾರಣಾ ಪ್ರಾಧಿಕಾರ ಶುಕ್ರವಾರ (ನ.24) ಬಾಧಿತರ ಅಹವಾಲು ಆಲಿಸಲಿದೆ.

‘ಏತನ್ಮಧ್ಯೆ ಬಾಧಿತರ ಆಕ್ಷೇಪಣೆ ಹಾಗೂ ಸಲಹೆಗಳನ್ನು ಮುಕ್ತವಾಗಿ ಪರಿಗಣಿಸಿ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣಾ ಪ್ರಾಧಿಕಾರಕ್ಕೆ ಸೂಚಿಸಿದ್ದು ಪ್ರತಿವಾದಿಗಳಿಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

ಈ ಕುರಿತಂತೆ ಕರ್ನಾಟಕ ಬಸ್‌ ಮಾಲೀಕರ ಒಕ್ಕೂಟದ ಅಧ್ಯಕ್ಷ ಕೆ.ರಾಜವರ್ಮ ಬಲ್ಲಾಳ ಸೇರಿದಂತೆ ಐವರು ರಿಟ್‌ ಅರ್ಜಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಪೀಠ ವಿಚಾರಣೆಗೆ ಅಂಗೀಕರಿಸಿದೆ.

ADVERTISEMENT

ಅರ್ಜಿದಾರರ ಕೋರಿಕೆ: ‘ಸರ್ಕಾರದ ಕ್ರಮ ಖಾಸಗಿ ಬಸ್ ಸಂಚಾರ ನಿರ್ಮೂಲನೆ ಮಾಡುವ ಉದ್ದೇಶದಿಂದ ಕೂಡಿದೆ. 2018ರ ಮಾರ್ಚ್‌ 24ರಂದು ಅಧಿಸೂಚನೆ ಹೊರಡಿಸಿರುವ ಅಧಿಸೂಚನೆ ನ್ಯೂನ್ಯತೆಗಳಿಂದ ಕೂಡಿದೆ. ವಿಚಾರಣಾ ಪ್ರಾಧಿಕಾರವು ಸಾರಿಗೆ ಸಚಿವರ ನೇತೃತ್ವದಲ್ಲಿ ಇರಬೇಕು. ಆದರೆ, ಈ ಪ್ರಕರಣದಲ್ಲಿ ಸಹಕಾರ ಸಚಿವರು ವಿಚಾರಣಾ ಪ್ರಾಧಿಕಾರದ ಮುಖ್ಯಸ್ಥರಾಗಿದ್ದಾರೆ’ ಎಂಬುದು ಅರ್ಜಿದಾರರ ಆಕ್ಷೇಪ.

ಅರ್ಜಿದಾರರ ಪರ ಹಿರಿಯ ವಕೀಲ ಎಸ್‌.ವಿಜಯಶಂಕರ್‌ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.