ADVERTISEMENT

ವಿಮಾನಕ್ಕಿಂತ ಬಸ್‌ ಪ್ರಯಾಣ ದುಬಾರಿ-ದೀಪಾವಳಿಗೆ ಊರಿಗೆ ಹೊರಟವರಿಗೆ ದರ ಏರಿಕೆ ಬಿಸಿ

ದೀಪಾವಳಿ ಆಚರಣೆಗೆ ಊರಿಗೆ ಹೊರಟವರಿಗೆ ಏರಿಕೆ ಬಿಸಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 20:01 IST
Last Updated 22 ಅಕ್ಟೋಬರ್ 2022, 20:01 IST
ದೀಪಾವಳಿ ಹಬ್ಬದ ಕಾರಣ ಹೊರ ಊರುಗಳಿಗೆ ಹೋಗುವುದಕ್ಕಾಗಿ ಶನಿವಾರ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಂಡ ಜನಜಂಗುಳಿ – ಪ್ರಜಾವಾಣಿ ಚಿತ್ರ
ದೀಪಾವಳಿ ಹಬ್ಬದ ಕಾರಣ ಹೊರ ಊರುಗಳಿಗೆ ಹೋಗುವುದಕ್ಕಾಗಿ ಶನಿವಾರ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಂಡ ಜನಜಂಗುಳಿ – ಪ್ರಜಾವಾಣಿ ಚಿತ್ರ   

ಬೆಂಗಳೂರು: ದೀಪಾವಳಿ ಹಬ್ಬದ ಸಾಲು ಸಾಲು ರಜೆಗಳಲ್ಲಿ ಬಸ್‌ನಲ್ಲಿ ಪ್ರಯಾಣ ಮಾಡುವರಿಗೆ ಟಿಕೆಟ್ ದರ ಏರಿಕೆಯ ಬಿಸಿ ತಟ್ಟಿದೆ. ಸಾಮಾನ್ಯ ದಿನಗಳ ದರಕ್ಕೆ ಹೋಲಿಸಿದರೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು, ವಿಮಾನ ಪ್ರಯಾಣ ದರಕ್ಕಿಂತಲೂ ಬಸ್ ಪ್ರಯಾಣ ದರ ದುಬಾರಿಯಾಗಿದೆ.

ಹಬ್ಬ ಮತ್ತು ಸರ್ಕಾರಿ ರಜೆಗಳ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಳವಾಗದಂತೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದರು. ಈ ಸಂಬಂಧ ಬಸ್‌ ಮಾಲೀಕರ ಸಭೆಗಳನ್ನೂ ನಡೆಸಿ ಸಾರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಇದ್ಯಾವುದಕ್ಕೂ ಕಿಮ್ಮತ್ತು ನೀಡದ ಖಾಸಗಿ ಬಸ್ ಆಪರೇಟರ್‌ಗಳು ಮನಸೋಇಚ್ಛೆ ಪ್ರಯಾಣ ದರ ಹೆಚ್ಚಳ ಮಾಡಿದ್ದಾರೆ.

ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಬೆಳಗಾವಿಗೆ ಶನಿವಾರ ಪ್ರಯಾಣ ಮಾಡುವವರಿಗೆ ಗರಿಷ್ಠ ದರ ₹7,999 ಇತ್ತು. ಕನಿಷ್ಠ ದರ ₹3,500 ದರ ಇತ್ತು. ಮಂಗಳೂರಿಗೆ ಗರಿಷ್ಠ ದರ ₹3 ಸಾವಿರ, ಮೈಸೂರಿಗೆ ₹2 ಸಾವಿರ, ಬಾಗಲಕೋಟೆಗೆ ₹2,500, ಶಿವಮೊಗ್ಗಕ್ಕೆ ₹2,199, ದಾವಣಗೆರೆಗೆ ₹2199, ಶಿರಸಿಗೆ ₹2,250 ದರ ಇತ್ತು.

ADVERTISEMENT

ಬೆಂಗಳೂರಿನಿಂದ ಮುಂಬೈಗೆ ಸ್ಲೀಪರ್‌ ಬಸ್‌ನಲ್ಲಿ ಮೇಲ್ಭಾಗದ (ಅಪ್ಪರ್‌) ಸೀಟುಗಳಿಗೆ ₹7,999 ಇದ್ದರೆ, ಕೆಳ ಭಾಗದ(ಲೋವರ್‌) ಸೀಟುಗಳಿಗೆ ₹9,999 ದರ ನಿಗದಿ ಮಾಡಲಾಗಿದೆ. ಬೆಂಗಳೂರಿನಿಂದ ಮುಂಬೈಗೆ ನೇರ ತೆರಳುವ ಬಸ್‌ಗಳಲ್ಲಿ ಹುಬ್ಬಳ್ಳಿ ಅಥವಾ ಬೆಳಗಾವಿಗೆ ಪ್ರಯಾಣಿಸುವ ಪ್ರಯಾಣಿಕರಿಂದಲೂ ಅಷ್ಟೇ ದರ ಪಡೆಯಲಾಗುತ್ತಿದೆ. ಈ ದರ ವಿಮಾನ ಪ್ರಯಾಣಕ್ಕಿಂತಲೂ ದುಬಾರಿ ಇದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಶನಿವಾರ ರಾತ್ರಿ ಹೊರಡುವ ವಿಮಾನಗಳಲ್ಲಿ ಪ್ರಯಾಣ ದರ ₹5,745 ಇತ್ತು. ಬಸ್ ಪ್ರಯಾಣ ದರ ಇದಕ್ಕಿಂತ ದುಬಾರಿ ಇರುವುದು ಪ್ರಯಾಣಿಕರನ್ನು ಕಂಗಾಲಾಗಿಸಿದೆ.

ಪರವಾನಗಿ ರದ್ದು: ಶ್ರೀರಾಮುಲು ಎಚ್ಚರಿಕೆ

ಬಳ್ಳಾರಿ: ‘ಹಬ್ಬದ ನೆಪದಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರಿಂದ ಹೆಚ್ಚು ದರ ವಸೂಲಿ ಮಾಡಿದರೆ ಅಂತಹ ಬಸ್‌ಗಳ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಎಚ್ಚರಿಕೆ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ಖಾಸಗಿಯವರು ಯಾವುದೇ ಕಾರಣಕ್ಕೂ ಹೆಚ್ಚಿನ ದರ ಪಡೆಯುವಂತಿಲ್ಲ. ಇದರ ಮೇಲೆ ನಿಗಾ ಇಡಲು ಕಾರ್ಯಪಡೆ ರಚಿಸಲಾಗಿದೆ’ ಎಂದು ತಿಳಿಸಿದರು.

150 ಬಸ್‌ಗಳ ವಿರುದ್ಧ ಪ್ರಕರಣ

ದರ ಏರಿಕೆ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು, 150 ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

‘ಪದೇ ಪದೇ ಎಚ್ಚರಿಕೆ ನೀಡಿದರೂ ಆನ್‌ಲೈನ್‌ನಲ್ಲಿ ದುಬಾರಿ ದರ ನಿಗದಿ ಮಾಡಿಕೊಂಡು ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ದರ ನಿಯಂತ್ರಣ ಸಂಬಂಧ ಮುಂದಿನ ವಾರವೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಆಯುಕ್ತ ಟಿ.ಎಚ್‌.ಎಂ. ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.