ADVERTISEMENT

‘ಖಾಸಗಿ ಬೇಡ– ಸಮುದಾಯ ಅರಣ್ಯ ಲೇಸು’

ಸಂರಕ್ಷಿತ ಅರಣ್ಯಗಳ ಪಕ್ಕದಲ್ಲೇ ಖಾಸಗಿ ವನ್ಯಜೀವಿಧಾಮ ಸ್ಥಾಪನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 20:21 IST
Last Updated 25 ಜೂನ್ 2018, 20:21 IST
ಸಭೆಯಲ್ಲಿ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ಪಿಸಿಸಿಎಫ್‌ (ವನ್ಯಜೀವಿ) ಸಿ.ಜಯರಾಮ್‌ ಚರ್ಚಿಸಿದರು. ಎಪಿಸಿಸಿಎಫ್‌ (ವನ್ಯಜೀವಿ) ಸುಭಾಷ್‌ ಮಾಲ್ಕಡೆ, ಪಿಸಿಸಿಎಫ್‌ (ಅರಣ್ಯ ಪಡೆ) ಪುನಟಿ ಶ್ರೀಧರ್‌ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ಪಿಸಿಸಿಎಫ್‌ (ವನ್ಯಜೀವಿ) ಸಿ.ಜಯರಾಮ್‌ ಚರ್ಚಿಸಿದರು. ಎಪಿಸಿಸಿಎಫ್‌ (ವನ್ಯಜೀವಿ) ಸುಭಾಷ್‌ ಮಾಲ್ಕಡೆ, ಪಿಸಿಸಿಎಫ್‌ (ಅರಣ್ಯ ಪಡೆ) ಪುನಟಿ ಶ್ರೀಧರ್‌ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದ ಸಂರಕ್ಷಿತ ಅರಣ್ಯಗಳ ಪಕ್ಕದಲ್ಲೇ ಖಾಸಗಿ ವನ್ಯಜೀವಿಧಾಮಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ಅರಣ್ಯ ಇಲಾಖೆಯ ಪ್ರಸ್ತಾವಕ್ಕೆ ವಿರೋಧ ವ್ಯಕ್ತವಾಗಿದೆ.

ಈ ವಿಷಯದ ಬಗ್ಗೆ ಅರಣ್ಯ ಇಲಾಖೆಯು ವನ್ಯಜೀವಿ ಮಂಡಳಿ ಮಂಡಳಿ ಸದಸ್ಯರು, ನಿವೃತ್ತ ಅಧಿಕಾರಿಗಳು ಹಾಗೂ ಗೌರವ ವನ್ಯಜೀವಿ ಪರಿಪಾಲಕರ ಜತೆಗೆ ಸೋಮವಾರ ಸಮಾಲೋಚನೆ ನಡೆಸಿತು. ‘ಈ ಕಲ್ಪನೆ ಅವೈಜ್ಞಾನಿಕ. ಇದರಿಂದ ಕಾನೂನು ಉಲ್ಲಂಘಿಸಲು ದಾರಿ ಮಾಡಿಕೊಟ್ಟಂತೆ ಆಗುತ್ತದೆ’ ಎಂದು ಐಎಫ್ಎಸ್‌ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳು ಪ್ರತಿಪಾದಿಸಿದರು. ‘ವನ್ಯಜೀವಿ ಧಾಮಗಳನ್ನು ಆರಂಭಿಸಿದರೆ ಮಾನವ–ಪ್ರಾಣಿ ಸಂಘರ್ಷ ಕಡಿಮೆಯಾಗಲಿದೆ’ ಎಂದು ಹಲವು ಪರಿಸರವಾದಿಗಳು ಅಭಿಪ್ರಾಯಪಟ್ಟರು.

‘ಖಾಸಗಿ ವನ್ಯಜೀವಿಧಾಮಗಳಿಗಿಂತ ಸಮುದಾಯ ಅರಣ್ಯಗಳು ಉತ್ತಮ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಇವುಗಳ ಆರಂಭಕ್ಕೆ ಅವಕಾಶ ಇದೆ. ವನ್ಯಜೀವಿ ಸಂರಕ್ಷಣೆಯೇ ಇಲಾಖೆಯ ಉದ್ದೇಶವಾಗಿದ್ದರೆ ವನ್ಯಜೀವಿಧಾಮದ ಸ್ವರೂಪವನ್ನು ಬದಲಿಸಬೇಕು’ ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ರವಿ ರಾಲ್ಫ್‌ ಕಿವಿಮಾತು ಹೇಳಿದರು.

ADVERTISEMENT

‘ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರವಾಸೋದ್ಯಮ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಹೀಗಾಗಿ ಈ ಪ್ರಸ್ತಾವವೇ ಅಗತ್ಯ ಇಲ್ಲ’ ಎಂದು ನಿವೃತ್ತ ಪಿಸಿಸಿಎಫ್‌ ಅವನಿ ಕುಮಾರ್‌ ವರ್ಮ ಹೇಳಿದರು.

‘ಹುಲಿ ಸಂರಕ್ಷಣೆ ಕಡೆಗೂ ನಾವು ಗಮನ ಹರಿಸಬೇಕಿದೆ. ಹೀಗಾಗಿ, ಈ ಯೋಜನೆ ಅನುಷ್ಠಾನಕ್ಕೆ ಮುನ್ನ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ (ಎನ್‌ಟಿಸಿಎ) ಸಲಹೆ ಪಡೆಯಬೇಕು. ಪರಿಸರ ಸೂಕ್ಷ್ಮ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದಿಂದ ಒಪ್ಪಿಗೆ ಪಡೆಯಬೇಕು. ಸಂರಕ್ಷಿತ ಅರಣ್ಯದ ಪಕ್ಕದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಒಪ್ಪಿಗೆ ನೀಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು’ ಎಂದು ನಿವೃತ್ತ ಪಿಸಿಸಿಎಫ್‌ ದೀಪಕ್‌ ಶರ್ಮ ಅಭಿಪ್ರಾಯಪಟ್ಟರು.

‘ರಾಜ್ಯದ ಅರಣ್ಯಗಳ ಪಕ್ಕದಲ್ಲಿ ಸಾವಿರಾರು ಎಕರೆ ಒತ್ತುವರಿಯಾಗಿದೆ. ಒತ್ತುವರಿ ತೆರವಿಗೆ ಆದ್ಯತೆ ನೀಡಲಿ. ಆಗ ಮಾನವ–ಪ್ರಾಣಿ ಸಂಘರ್ಷ ಕಡಿಮೆಯಾಗುತ್ತದೆ’ ಎಂದು ಕೆಲವರು ಸಲಹೆ ನೀಡಿದರು.

ಮುಖ್ಯ ವನ್ಯಜೀವಿ ವಾರ್ಡನ್‌ ಸಿ.ಜಯರಾಮ್‌ ಪ್ರತಿಕ್ರಿಯಿಸಿ, ‘ಆರಂಭದಲ್ಲಿ ಖಾಸಗಿ ಜಾಗವನ್ನು ಖಾಸಗಿ ಅರಣ್ಯ ಎಂದು ಘೋಷಿಸಲಾಗುತ್ತದೆ. ಅರಣ್ಯಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳು ಅನ್ವಯವಾಗಲಿವೆ. ಖಾಸಗಿ ವನ್ಯಜೀವಿ ಧಾಮಗಳಲ್ಲಿ ಶೇ 5ರಷ್ಟು ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಬಹುದು. ಇದನ್ನು ಕಡಿಮೆ ಮಾಡಲು ಅವಕಾಶ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.