ಪ್ರಿಯಾಂಕ್ ಖರ್ಗೆ
ಬೆಂಗಳೂರು: ‘ಚಿತ್ತಾಪುರ ಬಿಜೆಪಿ ಅಭ್ಯರ್ಥಿಯಿಂದ ನನಗೆ ಜೀವ ಬೆದರಿಕೆ ಬಂದಿದೆ. ಕಾನೂನು ಪಾಲಿಸುವಂತೆ ಹೇಳಿದ್ದಕ್ಕೆ ಮನೆಗೆ ನುಗ್ಗಿ ಹೊಡೆಯುವುದಾಗಿ ಬೆದರಿಸಿದ್ದಾರೆ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ದೂರು ನೀಡುತ್ತೇನೆ’ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿಯೂ ಆಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ನನಗೆ ಕರೆ ಮಾಡಿ ನೇರವಾಗಿ ಬೆದರಿಕೆ ಹಾಕಿದ್ದಾರೆ. ‘ಆರ್ಎಸ್ಎಸ್ನವರು ದೇಶಭಕ್ತರು, ಮನೆಗೆ ನುಗ್ಗಿ ಹೊಡೆಯುತ್ತೇವೆ’ ಎಂದಿದ್ದಾರೆ. ಇದನ್ನು ನಾವು ಸಹಿಸಬೇಕೇ? ಈ ಬೆದರಿಕೆ ವಿರುದ್ಧ ನಾನು ಡಿಜಿಪಿ ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ’ ಎಂದರು.
‘ನಾನು ಜನರಿಂದ ಆಯ್ಕೆಯಾದ ಪ್ರತಿನಿಧಿ. ಅವರು ಸವಾಲು ಹಾಕುತ್ತಿರುವುದು ನನಗಲ್ಲ, ರಾಜ್ಯದ ಕಾನೂನಿಗೆ. ಹೀಗೆ ಎಲ್ಲರೂ ಕಾನೂನು ಪಾಲಿಸುವುದಿಲ್ಲ ಎಂದರೆ ದೇಶದ ಗತಿ ಏನಾಗಬೇಕು? ಅನುಮತಿ ಇಲ್ಲದ ಕಾರಣವೇ ನಾವು ಎಲ್ಲವನ್ನೂ ತೆರವು ಮಾಡಿದ್ದೇವೆ’ ಎಂದರು.
‘ನನ್ನ ಬ್ಯಾನರ್ ಅನಧಿಕೃತವಾಗಿ ಹಾಕಿದ್ದಾಗ ನಗರಪಾಲಿಕೆ ಆಯುಕ್ತರು ನನಗೇ ದಂಡ ವಿಧಿಸಿದ್ದರು. ಅವರೂ ಕೂಡ ನಿಯಮಾನುಸಾರ ಅನುಮತಿ ತೆಗೆದುಕೊಳ್ಳಲಿ, ನಿಗದಿತ ಶುಲ್ಕ ಕಟ್ಟಲಿ. ಆರ್ಎಸ್ಎಸ್ ಬ್ಯಾನರ್, ಧ್ವಜ ಅಥವಾ ಪಥಸಂಚಲನ ಯಾವುದೇ ಇರಲಿ, ಅದಕ್ಕೆ ಬಿಜೆಪಿಯವರು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದು ಶುಲ್ಕ ಕಟ್ಟಲಿ’ ಎಂದರು.