ಬೆಂಗಳೂರು: ಪಾದರಾಯನಪುರದ ಕೋವಿಡ್ ಸೋಂಕಿತ ಮಹಿಳೆ ಶುಕ್ರವಾರ ಇಲ್ಲಿನ ವಾಣಿವಿಲಾಸ ಆಸ್ತತ್ರೆ
ಯಲ್ಲಿ ಮಗುವಿಗೆ ಜನ್ಮ ನೀಡಿದ್ದು ಆತಂಕಕ್ಕೆ ಕಾರಣವಾಗಿದ್ದು, ಕೋವಿಡ್ ಸೋಂಕಿತರ ಚಿಕಿತ್ದೆಗೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ವೈದ್ಯ ಸಿಬ್ಬಂದಿ ಶನಿವಾರ ಪ್ರತಿಭಟನೆ ನಡೆಸಿದರು.
ಈ ತಿಂಗಳ 7ರಂದು ಆಸ್ಪತ್ರೆಗೆ ದಾಖಲಾಗಿದ್ದ ಪಾದರಾಯನಪುರದ ಮಹಿಳೆಗೆ ಕೋವಿಡ್ ಸೋಂಕು ತಗುಲಿದ್ದು ದೃಢಪಟ್ಟ ಬಳಿಕ ಆತಂಕ ತಲೆದೋರಿದ್ದು ವೈದ್ಯರು ಹಾಗೂ ದಾದಿಯರ ದಿಢೀರ್ ಪ್ರತಿಭಟನೆಗೆ ಕಾರಣವಾಯಿತು.
ಕಳೆದ ಮೂರು ದಿನಗಳಿಂದ ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು ಆತಂಕವನ್ನು ಹೆಚ್ಚಿಸಿತು ಎಂದು ಆಸ್ಪತ್ರೆ ಸಿಬ್ಬಂದಿ ವಿವರಿಸಿದರು.
‘ನಾವು ಕೋವಿಡ್ ಸೋಂಕಿತರಿಗೆ ಆರೈಕೆ ಮಾಡುವುದಿಲ್ಲವೆಂದು ಹೇಳುತ್ತಿಲ್ಲ. ಆದರೆ, ಅದಕ್ಕೊಂದು ವ್ಯವಸ್ಥೆ ಇರಬೇಕು. ಸರದಿ ಮೇಲೆ ಸಿಬ್ಬಂದಿ ನೇಮಕ ಮಾಡಬೇಕು. ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬೇಕಾದ ಸೌಲಭ್ಯ ಗಳು ಇಲ್ಲ. ಇದರಿಂದಾಗಿ ಯಾರಿಗಾ
ದರೂ ಸೋಂಕು ತಗಲುವ ಸಾಧ್ಯತೆಯಿದೆ' ಎಂದು ವೈದ್ಯರೊಬ್ಬರು ತಿಳಿಸಿದರು.
‘ನಾವು ಇದುವರೆಗೆ 200 ಮಂದಿಗೆ ಪರೀಕ್ಷೆ ಮಾಡಿದ್ದೇವೆ. ಮಹಿಳೆಗೆ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ. ಈಗ 12 ಕೊರೊನಾ ಶಂಕಿತರಿದ್ದಾರೆ’ ಎಂದು ಆಸ್ಪತ್ರೆ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ತಿಳಿಸಿದರು.
ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪಿಪಿಇ ಕಿಟ್ಗಳಿಲ್ಲ. ಎನ್–95 ಮಾಸ್ಕ್ ಕೊರತೆ ಇದೆ ಎಂದು ಹೇಳಲಾಗುತ್ತಿದ್ದರೂ, ಆಸ್ಪತ್ರೆ ಆಡಳಿತಾಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.