ADVERTISEMENT

ಅತಿಥಿ ಶಿಕ್ಷಕರಿಗೆ ಪ್ಯಾಕೇಜ್‌ ಘೋಷಿಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 19:18 IST
Last Updated 30 ಜೂನ್ 2020, 19:18 IST
ಹೋರಾಟ ಸಮಿತಿಯ ಪ್ರಮುಖರು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು
ಹೋರಾಟ ಸಮಿತಿಯ ಪ್ರಮುಖರು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಹಾಗೂ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ರಾಜ್ಯ ಅತಿಥಿ ಉಪನ್ಯಾಸಕರು/ ಅತಿಥಿ ಶಿಕ್ಷಕರ ಹೋರಾಟ ಸಮಿತಿ (ಎಐಡಿವೈಒ) ಸರ್ಕಾರವನ್ನು ಒತ್ತಾಯಿಸಿದೆ.

ಹೋರಾಟ ಸಮಿತಿಯ ಪ್ರಮುಖರು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಮಂಗಳವಾರ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದರು.

‘ರಾಜ್ಯದ 413 ಸರ್ಕಾರಿ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರಿದ್ದಾರೆ. ಅವರನ್ನು ಆನ್‌ಲೈನ್‌ ಪಾಠಕ್ಕೂ ಬಳಸಿಕೊಳ್ಳಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗೆ ಪಾಠ ಮಾಡಲು 22,150 ಅತಿಥಿ ಶಿಕ್ಷಕರನ್ನು ಕಳೆದ ಸಾಲಿನಲ್ಲಿ ಬಳಸಿಕೊಳ್ಳಲಾಗಿತ್ತು’ ಎಂದು ಸಮಿತಿ ಹೇಳಿದೆ.

ADVERTISEMENT

‘ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಪ್ರತಿ ಬೋಧನಾ ಅವಧಿಗೆ ₹ 1,500 ಅಥವಾ ಮಾಸಿಕ ₹ 50 ಸಾವಿರ ಗೌರವಧನ ನಿಗದಿ ಮಾಡಬೇಕು ಎಂದು ಯುಜಿಸಿ ನಿರ್ದೇಶಿಸಿದೆ. ಆದರೆ, ಇಂದಿಗೂ ಎನ್‌ಇಟಿ ಅಥವಾ ಎಸ್‌ಎಲ್‌ಇಟಿ ಉತ್ತೀರ್ಣರಾಗಿರುವ ಹಾಗೂ ಪಿಎಚ್‌.ಡಿ ಹೊಂದಿರುವ ಅತಿಥಿ ಉಪನ್ಯಾಸಕರಿಗೂ ತಿಂಗಳಿಗೆ ಕೇವಲ ₹13 ಸಾವಿರ ಹಾಗೂ ಅತಿಥಿ ಶಿಕ್ಷಕರಿಗೆ ಮಾಸಿಕ ₹ 7,500 ಗೌರವಧನ ನೀಡಲಾಗುತ್ತಿದೆ. ಏಳೆಂಟು ತಿಂಗಳುಗಳಿಂದ ಗೌರವಧನವೂ ಪಾವತಿಯಾಗಿಲ್ಲ. ಲಾಕ್‌ಡೌನ್‌ನಿಂದಾಗಿ ಅವರ ಸಮಸ್ಯೆಗಳು ಉಲ್ಬಣಿಸಿವೆ’ ಎಂದು ಸಮಿತಿ ದೂರಿದೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗಿಗಳ ಸಂಬಳ ಕಡಿತ ಮಾಡಬಾರದು ಎನ್ನುವ ಸರ್ಕಾರ, ಅತಿಥಿ ಉಪನ್ಯಾಸಕರನ್ನು ಹಾಗೂ ಅತಿಥಿ ಶಿಕ್ಷಕರನ್ನು ಈ ಹೀನಾಯ ಸ್ಥಿತಿಗೆ ದೂಡುವುದು ಸರಿಯೇ’ ಎಂದು ಸಮಿತಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.