ADVERTISEMENT

ಪಿಎಸ್‌ಐ ಅಕ್ರಮ ನೇಮಕಾತಿ: 12 ಆರೋಪಿಗಳಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 21:38 IST
Last Updated 18 ನವೆಂಬರ್ 2022, 21:38 IST
   

ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಒಟ್ಟು 12 ಜನ ಆರೋಪಿಗಳಿಗೆ ನಗರದ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಜಾಮೀನು ನಿರಾಕರಿಸಿದೆ.

ಜಾಗೃತ್‌, ಸೋಮನಾಥ, ರಘುವೀರ್, ಮಮತೇಶ್‌ ಗೌಡ, ಸಿ.ಎಂ.ನಾರಾಯಣ , ಆರ್. ಮಧು, ಸಿ.ಕೆ.ದಿಲೀಪ್‌ ಕುಮಾರ್, ರಚನಾ ಹಣಮಂತ, ಪ್ರವೀಣ್‌ ಕುಮಾರ್ ರಾಘವೇಂದ್ರ, ಮಧ್ಯವರ್ತಿಗಳಾದ ಕೇಶವಮೂರ್ತಿ ಮತ್ತು ಶರತ್‌ ಕುಮಾರ್ ಜಾಮೀನು ಪಡೆದವರಾಗಿದ್ದಾರೆ. ಪೊಲೀಸ್ ಇಲಾಖೆಯ ವಿಭಾಗಾಧಿಕಾರಿ ಆರ್. ಮಂಜುನಾಥ್ ಮತ್ತು ಬ್ಯಾಡರ ಹಳ್ಳಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹರೀಶ್ಅವರಿಗೆ ಜಾಮೀನುನಿರಾಕರಿಸಲಾಗಿದೆ. ಅರ್ಜಿದಾರರ ಪರ ಹೈಕೋರ್ಟ್‌ನ ಹಿರಿಯ ವಕೀಲ ಎಂ.ಎಸ್.ಶ್ಯಾಮ ಸುಂದರ್‌ ಮಂಡಿಸಿದ್ದ ವಾದಾಂಶವನ್ನು ವಿಶೇಷ ನ್ಯಾಯಾ ಲಯದ ನ್ಯಾಯಾಧೀಶ ಕೆ.ಲಕ್ಷ್ಮೀನಾರಾಯಣ ಭಟ್ ಪುರಸ್ಕರಿಸಿದ್ದಾರೆ.

ಸಿಐಡಿ ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ‘ಹಗರಣದಿಂದ 55 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಇದೊಂದು ಸಾಮಾಜಿಕ-ಆರ್ಥಿಕ ಅಪರಾಧ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪ್ರಕಾರ, ಈ ಆರೋಪಿಗಳು ಒಎಂಆರ್ ಶೀಟ್ ಸೇರಿದಂತೆ ಪರೀಕ್ಷಾ ದಾಖಲೆಗಳನ್ನು ತಿರುಚಿಸಿದ್ದಾರೆ. ಸಿಬಿಐ ಹೆಚ್ಚುವರಿ ತನಿಖೆ ನಡೆಸುತ್ತಿರುವುದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದು’ ಎಂದು ಕೋರಿದ್ದರು.

ADVERTISEMENT

545 ಪಿಎಸ್‌ಐ ಹುದ್ದೆಗಳ ನೇಮಕ ಅಕ್ರಮದ ಈ ಹಗರಣದಲ್ಲಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ, ನಕಲು ಮತ್ತು ವಂಚನೆಗೆ ವಿದ್ಯುನ್ಮಾನ ಸಾಧನಗಳ ಬಳಕೆ ಮಾಡಿರುವುದೂ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.