ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತನಾಡುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದೆ.
ಪ್ರಿಯಾಂಕ ಖರ್ಗೆಯವರೇ ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಜತೆ ಇದೆ ಎಂದು ಆಪಾದಿಸಿದ್ದಿರಿ. ಆದರೆ ಇಲ್ಲಿ ನೋಡಿ... ಈ ಚಿತ್ರ ಏನು ಹೇಳುತ್ತದೆಎಂದು ಬಿಜೆಪಿ ಪ್ರಶ್ನಿಸಿದೆ.
ಎಷ್ಟೊಂದು ತನ್ಮಯತೆಯಿಂದ ಮಾತಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ದಿವ್ಯಾ ಹಾಗರಗಿ ಜತೆಗಿರುವ ಚಿತ್ರವನ್ನು ಪೋಸ್ಟ್ಮಾಡಿ ಟ್ವೀಟ್ ಮಾಡಲಾಗಿದೆ.
ನಿಮ್ಮ ಪಕ್ಷದ ಯಾರು ಯಾರು ಗೋಡಂಬಿ –ಬಾದಾಮಿ ತಿಂದಿರಬಹುದು ಎಂಬುದನ್ನು ವಿವರಿಸಬಹುದೇ ಎಂದೂ ಬಿಜೆಪಿ ಲೇವಡಿ ಮಾಡಿದೆ.
ಪಿಎಸ್ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ. ಅಧಿಕಾರ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ ಎಂದೂ ಹೇಳಿದೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ನಡೆಸುತ್ತಿರುವ ಪ್ರತಿಯೊಂದು ಷಡ್ಯಂತ್ರಕ್ಕೂ ಈಗ ದಾಖಲೆ ಲಭಿಸುತ್ತಿದೆ. ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷರ ಸದಾಶಿವನಗರದ ಬಂಗಲೆಯೇ ಪ್ರಮುಖ ಅಡ್ಡಾವಾಗಿದೆ. ಸಿಡಿ ವಿವಾದ, ಹಿಜಾಬ್ ಸಂಘರ್ಷ, 40 ಪರ್ಸೆಂಟ್ ಕಮಿಷನ್, ಹರ್ಷ ಕೊಲೆ,ಹುಬ್ಬಳ್ಳಿ ಗಲಭೆ, ಪಿಎಸ್ಐ ನೇಮಕ ಹಗರಣ ಎಲ್ಲದಕ್ಕೂ ಸೂತ್ರಧಾರ ಒಬ್ಬರೇ, ಅದು ಡಿ.ಕೆ.ಶಿವಕುಮಾರ್ ಎಂದು ಬಿಜೆಪಿ ಆರೋಪಿಸಿದೆ.
ನೀವೆಷ್ಟೇ ರಹಸ್ಯ ಕಾರ್ಯಾಚರಣೆ ನಡೆಸಿದರೂ ಸತ್ಯ ಒಂದಿಲ್ಲೊಂದು ದಿನ ಬಯಲಾಗಲೇಬೇಕಲ್ಲವೇ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.