ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಸಿವಿಲ್ ಪಿಎಸ್ಐ ಆಗಿ ನೇಮಕಗೊಂಡಿದ್ದ ವಿ.ರಮೇಶ್ ಎಂಬುವರು, ಇದೀಗ ಪಿಎಸ್ಐ ಕೆಲಸವನ್ನೇ ತ್ಯಜಿಸಿ ಪುನಃ ಹೆಡ್ ಕಾನ್ಸ್ಟೆಬಲ್ ಹುದ್ದೆಗೆ ಮರಳಿದ್ದಾರೆ.
2017ರಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದ ಮೈಸೂರಿನ ರಮೇಶ್, ಬೆಂಗಳೂರಿನ ಬನಶಂಕರಿ ಸಂಚಾರ ಠಾಣೆ ಹಾಗೂ ಎಸ್.ಜೆ.ಪಾರ್ಕ್ ಠಾಣೆಯಲ್ಲಿ ಪ್ರೊಬೇಷನರಿ ಪಿಎಸ್ಐ ಆಗಿ ಕೆಲಸ ಆರಂಭಿಸಿದ್ದರು.
ಅವರ ಕುಟುಂಬ ಮೈಸೂರಿನಲ್ಲೇ ಇತ್ತು. ವರ್ಗಾವಣೆ ಸಿಕ್ಕಿರಲಿಲ್ಲ. ತೀವ್ರತರವಾದ ಕೌಟುಂಬಿಕ ಹಾಗೂ ವೈಯಕ್ತಿಕ ಕಾರಣ ನೀಡಿದ್ದ ರಮೇಶ್, ತಮ್ಮನ್ನು ಪಿಎಸ್ಐ ಹುದ್ದೆಯಿಂದ ಬಿಡುಗಡೆ ಮಾಡಿ ಮಾತೃ ಸ್ಥಾನವಾದ ಮೈಸೂರಿನಲ್ಲಿ ಹೆಡ್ ಕಾನ್ಸ್ಟೆಬಲ್ ಹುದ್ದೆಗೆ ನಿಯುಕ್ತಿಗೊಳಿಸಬೇಕೆಂದು ಕೋರಿ ನಗರ ಪೊಲೀಸ್ ಕಮಿಷನರ್ ಅವರಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಪರಿಶೀಲಿಸಿದ್ದ ಕಮಿಷನರ್ ಭಾಸ್ಕರ್ ರಾವ್, ಆಡಳಿತ ವಿಭಾಗಕ್ಕೆ ಕಳುಹಿಸಿದ್ದರು. ಇದೀಗ ಅರ್ಜಿಯನ್ನು ಪುರಸ್ಕರಿಸಲಾಗಿದ್ದು, ಮಾತೃ ಹುದ್ದೆಗೆ ಹೋಗಲು ರಮೇಶ್ ಅವರಿಗೆ ಅನುಮತಿ ಸಿಕ್ಕಿದೆ.
ರಮೇಶ್ ಅವರನ್ನು ಪಿಎಸ್ಐ ಹುದ್ದೆಯಿಂದ ಬಿಡುಗಡೆ ಮಾಡಲಾಗಿದ್ದು, ಅವರು ಪುನಃ ಮೈಸೂರಿನಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ಸೇವೆ ಮುಂದುವರಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.