ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ರಜೆ ರಹಿತ ಇಲಾಖೆ ಎಂದು ಘೋಷಿಸಬೇಕು. ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ ತುರ್ತು ಸೇವಾ ಸಿಬ್ಬಂದಿಗೆ ನೀಡುವ ಎಲ್ಲ ಸವಲತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜಗಳ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಲಿಖಿತ ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಶಿವರಾಮ್ ಬಿ. ಮಾಲೀಪಾಟೀಲ ಅವರು, ‘ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ–2ಗೆ ಕಡ್ಡಾಯವಾಗಿ ನೋಂದಾಯಿಸಬೇಕು. ವಿಶೇಷ ಬೋಧನಾ ತರಗತಿಗಳನ್ನು ನಡೆಸಿ, ಫಲಿತಾಂಶ ವೃದ್ಧಿಸಬೇಕು’ ಎಂದು ಪದವಿಪೂರ್ವ ಶಿಕ್ಷಣ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಇದು ಉಪನ್ಯಾಸಕರ ಮೇಲೆ ಮತ್ತಷ್ಟು ಒತ್ತಡ ತಂದಿದೆ ಎಂದು ದೂರಿದ್ದಾರೆ.
ಉಪನ್ಯಾಸಕರು ಬೋಧನಾ ಕಾರ್ಯ, ಕಿರು ಪರೀಕ್ಷೆ, ಪೂರ್ವಸಿದ್ಧತಾ ಪರೀಕ್ಷೆಗಳ ಜತೆಗೆ, ಮೂರು ಮುಖ್ಯ ಪರೀಕ್ಷೆಗಳು, ಮೌಲ್ಯಮಾಪನ ಕಾರ್ಯಕ್ಕಾಗಿ ಬೇಸಿಗೆ ರಜೆಯನ್ನೇ ತ್ಯಾಗ ಮಾಡಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಮುಂದಿನ ಪರೀಕ್ಷೆಗಳಿಗೆ ಕಡ್ಡಾಯವಾಗಿ ನೋಂದಾಯಿಸುವುದು, ವಿಶೇಷ ತಗರತಿ ಆಯೋಜಸುವುದು ಕಷ್ಟವಾಗುತ್ತದೆ. ಇದರಿಂದ ಇಡೀ ವರ್ಷ ರಜೆಯ ಸೌಲಭ್ಯವಿಲ್ಲದೇ ಕೆಲಸ ಮಾಡಬೇಕಿದೆ. ಹಾಗಾಗಿ, ಸುತ್ತೋಲೆ ಹಿಂಪಡೆಯುವಂತೆ ಸೂಚಿಸಬೇಕು. ಇಲ್ಲಿದ್ದರೆ ಪ್ರತಿಭಟನಾ ಮಾರ್ಗ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.