ADVERTISEMENT

ದ್ವಿತೀಯ ಪಿಯು ಮೌಲ್ಯಮಾಪನ ಆಫ್‌!

ಸರ್ವರ್‌ ಡೌನ್‌;ವಿವಿಧ ಜಿಲ್ಲೆಗಳಲ್ಲಿ ಉಪನ್ಯಾಸಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:39 IST
Last Updated 26 ಮಾರ್ಚ್ 2019, 19:39 IST
ದ್ವಿತೀಯ ಪಿಯು ಮೌಲ್ಯಮಾಪನ- ಸಾಂದರ್ಭಿಕ ಚಿತ್ರ
ದ್ವಿತೀಯ ಪಿಯು ಮೌಲ್ಯಮಾಪನ- ಸಾಂದರ್ಭಿಕ ಚಿತ್ರ   

ಬೆಂಗಳೂರು: ತಾಂತ್ರಿಕ ಸಮಸ್ಯೆ ಮತ್ತು ಸರ್ವರ್‌ ಡೌನ್‌ ಆದ ಕಾರಣ ಎರಡನೇ ದಿನವೂ ರಾಜ್ಯದ ಬಹುತೇಕ ಎಲ್ಲ ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆಗೆ ಹೊಡೆತ ಬಿದ್ದಿದೆ.

ತಾಂತ್ರಿಕ ಸಮಸ್ಯೆ ಮತ್ತು ಹೊಸ ವ್ಯವಸ್ಥೆ ನಿರ್ವಹಣೆ ತಿಳಿವಳಿಕೆ ಇಲ್ಲದ ಕಾರಣ ಮೌಲ್ಯಮಾಪಕರು ವಿವಿಧ ಜಿಲ್ಲೆಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿಯೊಬ್ಬ ಮೌಲ್ಯಮಾಪಕ 10 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ ಬಳಿಕ ಅಂಕವನ್ನು ಕಂಪ್ಯೂಟರ್‌ ಮೂಲಕ ಸರ್ವರ್‌ಗೆ ವರ್ಗಾಯಿಸಬೇಕು. ಆದರೆ, ಸರ್ವರ್‌ ವೇಗ ಇಲ್ಲದ ಕಾರಣ ಒಂದೊಂದು ಉತ್ತರ ಪತ್ರಿಕೆಯ ಅಂಕ ವರ್ಗಾಯಿಸಲು 25 ರಿಂದ 30 ನಿಮಿಷ ಬೇಕು. ಆದರೆ, ಇನ್ನು ಕೆಲವು ಕೇಂದ್ರಗಳಲ್ಲಿ ಸರ್ವರ್‌ ತೆರೆದುಕೊಳ್ಳದ ಕಾರಣ ಕಂಪ್ಯೂಟರ್‌ ಮುಂದೆ ಸರದಿಯಲ್ಲಿ ನಿಲ್ಲುವಂತಾಗಿದೆ ಎಂದು ಉಪನ್ಯಾಸಕರೊಬ್ಬರು ತಿಳಿಸಿದರು.

ADVERTISEMENT

‘ಉಪನ್ಯಾಸಕರಿಗೆ ಬೆದರಿಕೆ ಸರಿಯಲ್ಲ’

ಮೌಲ್ಯಮಾಪನಕ್ಕೆ ಹಾಜರಾಗದಿದ್ದರೆ, ಕ್ರಿಮಿನಲ್‌ ಮೊಕದ್ದಮೆ ಹೂಡುವುದಾಗಿ ಪದವಿಪೂರ್ವ ಶಿಕ್ಷಣ ನಿರ್ದೇಶಕರು ಎಚ್ಚರಿಕೆಯ ಜ್ಞಾಪನ ಪತ್ರ ಕಳಿಸಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂತಹ ಬೆದರಿಕೆ ಭಾಷೆ ಬಳಸುವುದು ಸರಿಯಲ್ಲ ಎಂದು ದಕ್ಷಿಣಕನ್ನಡ ಉಪನ್ಯಾಸಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ಉಪನ್ಯಾಸಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಕ್ರಿಮಿನಲ್‌ಗಳನ್ನು ನಡೆಸಿಕೊಳ್ಳುವಂತೆ ನಡೆಸಿಕೊಳ್ಳಬಾರದು ಎಂದರು.

*ಇವತ್ತು ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನ ನಡೆದಿದ್ದರಿಂದ, ಸರ್ವರ್‌ ಮೇಲೆ ಒತ್ತಡ ಹೆಚ್ಚಾಗಿತ್ತು. ನಾಳೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಸುಗಮವಾಗಿ ನಡೆಯುತ್ತದೆ.

- ಡಾ.ಪಿ.ಸಿ.ಜಾಫರ್‌, ನಿರ್ದೇಶಕ , ಪದವಿ ಪೂರ್ವ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.