ADVERTISEMENT

ಪುಸ್ತಕ ಆಯ್ಕೆ ಸಮಿತಿ ನೇಮಕ: ಪ್ರಾದೇಶಿಕ ಅಸಮಾನತೆಗೆ ಆಕ್ಷೇಪ

ಬೆಂಗಳೂರು–ಮೈಸೂರು ಭಾಗದವರಿಗೇ ಆದ್ಯತೆ

ವರುಣ ಹೆಗಡೆ
Published 9 ಸೆಪ್ಟೆಂಬರ್ 2020, 18:52 IST
Last Updated 9 ಸೆಪ್ಟೆಂಬರ್ 2020, 18:52 IST
ವಿಧಾನಸೌಧ
ವಿಧಾನಸೌಧ    

ಬೆಂಗಳೂರು:ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ ಕಾರ್ಯನಿರ್ವಹಿಸುವ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸದಸ್ಯರ ನೇಮಕಾತಿಯಲ್ಲಿ ಪ್ರಾದೇಶಿಕ ಹಾಗೂ ಸಾಮಾಜಿಕ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಆಕ್ಷೇಪ ಸಾಂಸ್ಕೃತಿಕ ವಲಯದಲ್ಲಿ ವ್ಯಕ್ತವಾಗಿದೆ.

ರಾಜ್ಯಸರ್ಕಾರವು ಕಳೆದ ತಿಂಗಳು ಸಮಿತಿಯನ್ನು ಪುನರ್‌ ರಚಿಸಿ, ಕವಿ ದೊಡ್ಡರಂಗೇಗೌಡಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ಐವರು ಸದಸ್ಯರನ್ನು ಆಯ್ಕೆ ಮಾಡಿದ್ದು,8 ಮಂದಿ (ಸಂಘ–ಸಂಸ್ಥೆಗಳ ಮುಖ್ಯಸ್ಥರು) ಪ್ರಾತಿನಿಧಿಕ ಸದಸ್ಯರಾಗಿದ್ದಾರೆ. ಆಯ್ಕೆಯಾದ ಸದಸ್ಯ ರಲ್ಲಿ ಎಂ. ಮಂಜುನಾಥ ಬಮ್ಮನಕಟ್ಟಿ (ಗದಗ) ಅವರನ್ನು ಬಿಟ್ಟು ಉಳಿದ ಸದಸ್ಯರು ಬೆಂಗಳೂರು ಹಾಗೂ ಮೈಸೂರು ಭಾಗಕ್ಕೆ ಸೇರಿದವರಾಗಿದ್ದಾರೆ. ಒಂದೇ ಜಾತಿಯವರಿಗೆ ಮಣೆ ಹಾಕಲಾಗಿದೆ ಎಂಬ ಆರೋಪ ಕೂಡ ಮುನ್ನೆಲೆಗೆ ಬಂದಿದೆ.

ಕಳೆದ ಸಮಿತಿಯ ಅವಧಿ ನ.9, 2019 ರಂದು ಮುಕ್ತಾಯವಾಗಿತ್ತು. 9 ತಿಂಗಳ ಬಳಿಕವೂ ಪೂರ್ಣ ಪ್ರಮಾಣದಲ್ಲಿ ಸದಸ್ಯರನ್ನು ನೇಮಿಸದಿರುವುದು ಕೂಡ ಸಾಂಸ್ಕೃತಿಕ ವಲಯದ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ನಿರಂತರ ಅನ್ಯಾಯ: ‘ಕರ್ನಾಟಕ ಏಕೀಕರಣವಾಗಿ ಆರು ದಶಕಗಳು ಕಳೆದರೂ ಪ್ರಾದೇಶಿಕ ಅಸಮಾನತೆ ನಿವಾರಣೆಯಾಗಿಲ್ಲ. ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಅನ್ಯಾಯ ಆಗುತ್ತಲೇ ಇದೆ. ಹಲವಾರು ಸಾಹಿತಿಗಳು ನಮ್ಮ ಭಾಗದಲ್ಲಿದ್ದಾರೆ. ಆದರೆ, ಗುರುತಿಸುವ ಕೆಲಸವಾಗುತ್ತಿಲ್ಲ. ಎಲ್ಲ ಭಾಗದವರಿಗೂ ಸಮಾನ ಅವಕಾಶಗಳು ಸಿಗಬೇಕು. ಬೆಂಗಳೂರು ಮತ್ತು ಮೈಸೂರು ಭಾಗಕ್ಕೆ ವಿಶೇಷ ಆದ್ಯತೆ ನೀಡುವುದು ಸರಿಯಲ್ಲ’ ಎಂದು ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಬೇಸರ ವ್ಯಕ್ತಪಡಿಸಿದರು.

‘ಪ್ರತಿವರ್ಷ 7 ಸಾವಿರಕ್ಕೂ ಅಧಿಕಹೊಸ ಶೀರ್ಷಿಕೆಗಳು ಪ್ರಕಟವಾಗುತ್ತವೆ.ಹಾಗಾಗಿ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಕೃಷಿ ಮಾಡಿದವರನ್ನು ಗುರುತಿಸಿ, ಸಮಿತಿಗೆ ನೇಮಕ ಮಾಡಬೇಕು. ನೂತನ ಸಮಿತಿಯಲ್ಲಿಒಂದೇ ಜಾತಿಗೆ ಮಣೆ ಹಾಕಲಾಗಿದ್ದು, ಮೂರುಮಂದಿ ಒಕ್ಕಲಿಗ ಜಾತಿಗೆ ಸೇರಿದವರಾಗಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಾಹಿತಿಯೊಬ್ಬರು ಆರೋಪಿಸಿದರು.

‘ನಾನು ಅಭಿರುಚಿ, ಪ್ರಾದೇಶಿಕತೆಗೆ ಆದ್ಯತೆ ನೀಡುತ್ತೇನೆ. ಅತ್ಯುತ್ತಮವಾದ ಕೃತಿಗಳನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ. ಇದಕ್ಕೆ ಬದ್ಧನಾಗಿರು
ತ್ತೇನೆ’ ಎಂದು ಅಧ್ಯಕ್ಷ ದೊಡ್ಡರಂಗೇಗೌಡ ತಿಳಿಸಿದರು.

***

ಸಮಿತಿ ಪೂರ್ಣ ಪ್ರಮಾಣದಲ್ಲಿ ರಚನೆ ಆಗಿಲ್ಲ. ಬಾಕಿ ಸದಸ್ಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಒಂದೇ ಜಾತಿಗೆ ಆದ್ಯತೆ ದೊರೆತಿರುವುದು ನನ್ನ ಗಮನಕ್ಕೆ ಬಂದಿಲ್ಲ

-ಎಸ್.ಆರ್. ಉಮಾಶಂಕರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

***

ಸರ್ಕಾರವು ಜಾಣ ಕುರುಡು ಹಾಗೂ ಕಿವುಡುತನವನ್ನು ಪ್ರದರ್ಶಿಸುತ್ತಿದೆ. ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಲೇಖಕಿಯರಿದ್ದಾರೆ. ಆದರೆ ನಿರಂತರ ಅನ್ಯಾಯ ಆಗುತ್ತಿದೆ

-ಡಾ.ಹೇಮಾ ಪಟ್ಟಣಶೆಟ್ಟಿ, ಪ್ರಕಾಶಕಿ

***

ಪುಸ್ತಕ ಆಯ್ಕೆ ಸಮಿತಿ ಇನ್ನೂ ಪೂರ್ಣಗೊಂಡಿಲ್ಲ. ನಿಯಮ ದಂತೆ ಸಾಹಿತ್ಯದ ವಿವಿಧ ಪ್ರಕಾರಗಳ ತಜ್ಞರು ಹಾಗೂ ಲೇಖಕಿಯರನ್ನು ನೇಮಕ ಮಾಡಲಾಗುವುದು

-ಎಸ್. ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.