ADVERTISEMENT

ಅಭಿಜ್ಞಾಗೆ ಎಂಜಿನಿಯರಿಂಗ್‌ ಕನಸು

ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 15:03 IST
Last Updated 14 ಜುಲೈ 2020, 15:03 IST
ಅಭಿಜ್ಞಾಗೆ ಸಿಹಿ ತಿನಿಸುತ್ತಿರುವ ತಾಯಿ ಆಶಾ ರಾವ್‌.
ಅಭಿಜ್ಞಾಗೆ ಸಿಹಿ ತಿನಿಸುತ್ತಿರುವ ತಾಯಿ ಆಶಾ ರಾವ್‌.   

ಉಡುಪಿ: ಉಡುಪಿಯ ವಿದ್ಯೋದಯ ಪಿಯು ಕಾಲೇಜು ವಿದ್ಯಾರ್ಥಿನಿ ಅಭಿಜ್ಞಾ ರಾವ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ.

ಸಂಸ್ಕೃತ, ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಕಂಪ್ಯೂಟರ್ ಸೈನ್ಸ್‌ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿರುವ ಅಭಿಜ್ಞಾ ರಾವ್ ಒಟ್ಟು 596 ಅಂಕ ಪಡೆದಿದ್ದಾರೆ. ಆಶಾ ರಾವ್ ಹಾಗೂ ದಿವಂಗತ ವಿಠಲರಾವ್‌ ದಂಪತಿ ಪುತ್ರಿಯಾಗಿರುವ ಅಭಿಜ್ಞಾ ರಾವ್ ತಮ್ಮ ಸಾಧನೆಯ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದರು.

‘ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್‌ ಸಿಕ್ಕಿತ್ತು. ಪಿಯುಸಿಯಲ್ಲೂ ರ‍್ಯಾಂಕ್‌ ಪಡೆಯಲೇಬೇಕು ಎಂಬ ಛಲದಲ್ಲಿ ಅಭ್ಯಾಸ ಮಾಡಿದ್ದೆ. ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಬಂದಿರುವುದು ಸಂತಸವಾಗಿದೆ. ಸಾಧನೆಯ ಹಿಂದೆ ವಿದ್ಯೋದಯ ಕಾಲೇಜು ಸಿಬ್ಬಂದಿಯ ಶ್ರಮ ದೊಡ್ಡದು. ಕಾಲೇಜಿನಲ್ಲಿ ಪರೀಕ್ಷಾ ಪೂರ್ವ ತಯಾರಿ, ನಿರಂತರ ಪರೀಕ್ಷೆಗಳು, ಬೋಧನಾ ಕ್ರಮ ಉತ್ತಮ ಅಂಕ ಗಳಿಕೆಗೆ ನೆರವಾಯಿತು‌.ಮನೆಯಲ್ಲೂ ಓದಿಗೆ ಪೂರಕ ವಾತಾವರಣ ಇತ್ತು.ಅಂದಿನ ಪಠ್ಯವನ್ನು ಅಂದೇ ಓದುವ ಹವ್ಯಾಸ, ಲಾಕ್‌ಡೌನ್‌ ಅವಧಿಯನ್ನು ಓದಿಗೆ ಬಳಸಿಕೊಂಡಿದ್ದು ಮೊದಲ ರ‍್ಯಾಂಕ್‌ ಪಡೆಯಲು ನೆರವಾಯಿತು’ ಎಂದರು ಅಭಿಜ್ಞಾ.

ADVERTISEMENT

‘ಮುಂದೆ ಸಾಫ್ಟ್‌ವೇರ್‌ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸಿದೆ. ಓದು ಹೊರತುಪಡಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಗ್ರೇಡ್‌ ಪದವಿ ಪಡೆದಿದ್ದೇನೆ. ಯೋಗಾಭ್ಯಾಸ, ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಇದೆ’ ಎಂದರು.‌

ವಿದ್ಯೋದಯ ಪಬ್ಲಿಕ್ ಕಾಲೇಜು ವಿದ್ಯಾರ್ಥಿನಿ ಅಭಿಜ್ಞಾ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಪಡೆದಿರುವುದು ಸಂತಸ ತಂದಿದೆ ಸಂಸ್ಥೆಯು ಕಳೆದ 8 ವರ್ಷಗಳಿಂದ ಪಿಯುಸಿಯಲ್ಲಿ ಶೇ 100 ಫಲಿತಾಂಶ ಪಡೆಯುತ್ತಿದೆ ಎಂದು ಪ್ರಾಂಶುಪಾಲ ಲಕ್ಷ್ಮೀನಾರಾಯಣ ಛಾತ್ರ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.