ADVERTISEMENT

ಮತೀಯ ಗೂಂಡಾಗಿರಿ: ಮತ್ತಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಮೇ 2023, 19:13 IST
Last Updated 3 ಮೇ 2023, 19:13 IST
ಹಲ್ಲೆಗೊಳಗಾದ ಯುವಕನ ಮೈಯಲ್ಲಿ ಬಾಸುಂಡೆಗಳು ಎದ್ದಿರುವುದು
ಹಲ್ಲೆಗೊಳಗಾದ ಯುವಕನ ಮೈಯಲ್ಲಿ ಬಾಸುಂಡೆಗಳು ಎದ್ದಿರುವುದು   

ಪುತ್ತೂರು: ಇಲ್ಲಿ ಮಂಗಳವಾರ ನಡೆದ ಮತೀಯ ಗೂಂಡಾಗಿರಿ ಪ್ರಕರಣ ಸಂಬಂಧ ಮತ್ತಿಬ್ಬರನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ.

ತಾಲ್ಲೂಕಿನ ಮರೀಲ್ ಕಾಡುಮನೆ ನಿವಾಸಿ ಕೆ. ಇಬ್ರಾಹಿಂ ಅವರ ಪುತ್ರ ಮಹಮ್ಮದ್ ಫಾರಿಶ್ (18) ಹಿಂದೂ ಧರ್ಮದ ಯುವತಿಯೊಂದಿಗೆ ಇದ್ದಾಗ ಗುಂಪೊಂದು ಮಂಗಳವಾರ ಹಲ್ಲೆ ನಡೆಸಿತ್ತು. ಯುವಕನ ಮೈಮೇಲೆ ಬಾಸುಂಡೆಗಳು ಎದ್ದಿದ್ದವು.

ಯುವಕ ಮತ್ತು ಆತನ ಜೊತೆಗಿದ್ದ ಯುವತಿ ಇಬ್ಬರೂ ಕಬಕ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು. ಇಬ್ಬರೂ ನಗರದ ಮಾಲ್‌ವೊಂದರ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದರು. ಬಳಿಕ  ಜ್ಯೂಸ್ ಕುಡಿಯಲು ಬಸ್‌ ನಿಲ್ದಾಣದ ಬಳಿಯ ಮಳಿಗೆಗೆ ಒಟ್ಟಿಗೆ ಹೋಗಿದ್ದಾಗ ಯುವಕನ ಮೇಲೆ ಹಲ್ಲೆ ನಡೆದಿತ್ತು. ಗಾಯಾಳು ಚಿಕಿತ್ಸೆಗಾಗಿ ಯುವಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಮೂಲಗಳು ತಿಳಿಸಿವೆ. 

ADVERTISEMENT

ಕೃತ್ಯಕ್ಕೆ ಸಂಬಂಧಿಸಿದಂತೆ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಸಿರ್ತಾಜೆ ಮನೆಯ ಪ್ರದೀಪ್‌ ಎಸ್‌ (19) ಎಂಬಾತನ್ನು ಪೊಲೀಸರು ಬಂಧಿಸಿದ್ದರು.

‘ಪ್ರಕರಣದ ಇತರ ಆರೋಪಿಗಳಾದ ಕೆದಂಬಾಡಿ ಗ್ರಾಮದ ತಿಂಗಳಾಡಿಯ ದಿನೇಶ್‌ ಗೌಡ (25), ಗುತ್ತುಮನೆಯ ನಿಶಾಂತ್ ಕುಮಾರ್‌ ಜಿ. (19) ‌ಆರ್ಯಾಪು ಗ್ರಾಮದ  ಕೊಟ್ಟಾರು ಮನೆಯ ಪ್ರಜ್ವಲ್‌ (23) ಎಂಬಾತನನ್ನು ನಂತರ ಬಂಧಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.