ಆರ್. ಅಶೋಕ
ಮೈಸೂರು: ‘ನಮ್ಮ ಹೋರಾಟದ ಕಾರಣದಿಂದಾಗಿಯೇ ಯುವಜನರಿಗೆ ಉದ್ಯೋಗ ಸಿಗುವಂತಾಗಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಧಾರವಾಡದಲ್ಲಿ ವಿದ್ಯಾರ್ಥಿಗಳ ಹೋರಾಟಕ್ಕೆ ಪೊಲೀಸರು ಆರು ತಿಂಗಳಿಂದಲೂ ಅನುಮತಿ ಕೊಟ್ಟಿರಲಿಲ್ಲ. ಪಕ್ಷದ ಲೆಟರ್ಹೆಡ್ನಲ್ಲೇ ಅನುಮತಿ ಕೇಳಿದ್ದೆವು. ಪೊಲೀಸರು ಬಿಜೆಪಿಯ ಹೋರಾಟವೆಂಬ ಕಾರಣದಿಂದಲೇ ಸಮ್ಮತಿ ಕೊಟ್ಟಿದ್ದಾರೆ’ ಎಂದು ಸಮರ್ಥಿಸಿಕೊಂಡರು.
‘ಧಾರವಾಡದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟ ಹಾಗೂ ನಮ್ಮ ಬೆಂಬಲದಿಂದಾಗಿ ಸರ್ಕಾರ ಕ್ರಮ ಕೈಗೊಂಡಿದೆ. ಹೋರಾಟದಲ್ಲಿ ನಮ್ಮವರು ಕಡಿಮೆ ಇದ್ದರು, ವಿದ್ಯಾರ್ಥಿಗಳೇ ಜಾಸ್ತಿ ಇದ್ದರು. ಆ ಹೋರಾಟದಿಂದಾಗಿಯೇ ಸರ್ಕಾರ 56ಸಾವಿರ ಉದ್ಯೋಗ ಭರ್ತಿ ಮಾಡುತ್ತೇವೆ ಎಂದು ಹೇಳಿದೆ’ ಎಂದರು.
‘ನಾವು ಹೋರಾಟ ಮಾಡಿದ್ದು 2.84 ಲಕ್ಷ ಹುದ್ದೆಗಳ ಭರ್ತಿಗಾಗಿಯೇ ಹೊರತು ಕೇವಲ 57ಸಾವಿರಕ್ಕಲ್ಲ. ಸರ್ಕಾರ ಕೇವಲ ಹೇಳಿಕೆ ನೀಡಿ ಸುಮ್ಮನೆ ಕೂರುವುದಲ್ಲ. ಎಲ್ಲ ಹುದ್ದೆಗಳಿಗೂ ಯಾವಾಗ ನೇಮಕ ಮಾಡಲಾಗುತ್ತದೆ. ಯಾವಾಗ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು’ ಎಂದು ಒತ್ತಾಯಿಸಿದರು.
‘ಹುದ್ದೆಗಳ ಭರ್ತಿ ಬಗ್ಗೆ ಮುಂಬರುವ ಬಜೆಟ್ನಲ್ಲಿ ಪ್ರಸ್ತಾಪಿಸದಿದ್ದಲ್ಲಿ ದೊಡ್ಡ ಮಟ್ಟದ ಚಳವಳಿ ನಡೆಸುತ್ತೇವೆ. ಹುಬ್ಬಳ್ಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.