
ಎಂ.ಬಿ. ಪಾಟೀಲ
ಬೆಂಗಳೂರು:
ರಾಜ್ಯದ ವಿಜಯಪುರ, ಬೆಳಗಾವಿ, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿರುವ ಸೂರಗೊಂಡನಕೊಪ್ಪ ರೈಲು ನಿಲ್ದಾಣಗಳನ್ನು ಸ್ಥಳೀಯ ಸಾಂಸ್ಕೃತಿಕ ಮಹತ್ತ್ವಕ್ಕೆ ಪೂರಕವಾಗಿ ಬದಲಿಸಿ, ಹೊಸ ನಾಮಕರಣ ಮಾಡಬೇಕೆಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಶಿಫಾರಸು ಮಾಡಿದ್ದು, ಈ ಸಂಬಂಧವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ರೈಲು ನಿಲ್ದಾಣ ಎಂದು, ಬೆಳಗಾವಿ ನಿಲ್ದಾಣಕ್ಕೆ ಶ್ರೀ ಬಸವ ಮಹಾಸ್ವಾಮೀಜಿ, ಬೀದರ್ ನಿಲ್ದಾಣಕ್ಕೆ ಚನ್ನಬಸವ ಪಟ್ಟದ್ದೇವರು ಮತ್ತು ಸೂರಗೊಂಡನಕೊಪ್ಪ ನಿಲ್ದಾಣಕ್ಕೆ ಭಾಯಗಡ ರೈಲು ನಿಲ್ದಾಣ ಎಂದು ಹೊಸ ಹೆಸರುಗಳನ್ನು ಇಡಬೇಕೆಂದು ಪ್ರಸ್ತಾಪಿಸಿದ್ದಾರೆ.
ಸರ್ಕಾರ ಈ ನಾಲ್ಕು ನಿಲ್ದಾಣ ಗಳಿಗೆ ಸಂತರ ಹೆಸರು ಇಡಲು ಶಿಫಾರಸು ಮಾಡಿದ್ದು, ಅದಕ್ಕೆ ಗೃಹ ಸಚಿವಾಲಯದ ಒಪ್ಪಿಗೆ ಬೇಕಾಗಿದೆ. ಹೀಗಾಗಿ ಮೂಲಸೌಕರ್ಯ ಇಲಾಖೆ ಮೂಲಕ ಪತ್ರ ರವಾನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಈ ನಾಲ್ಕೂ ರೈಲು ನಿಲ್ದಾಣಗಳು ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿವೆ. ಕರ್ನಾಟಕದ ಈ ಭಾಗಗಳಿಗೆ ತಾವು ಸೂಚಿಸಿರುವ ಸಂತರ ಕೊಡುಗೆ ಮೌಲಿಕವಾಗಿದೆ. ಈ ಶಿಫಾರಸನ್ನು ಅಂಗೀಕರಿಸಿ, ಮರುನಾಮಕರಣದ ಸಂಗತಿಯನ್ನು ಆದಷ್ಟು ಬೇಗ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಸಚಿವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.