ಬೆಂಗಳೂರು: ಶನಿವಾರ ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದರೆ, ಮಲೆನಾಡು ಮತ್ತು ಬಯಲುಸೀಮೆಯ ಕೆಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಬಳ್ಳಾರಿ ಜಿಲ್ಲೆಯ ಉಚ್ಚಂಗಿದುರ್ಗ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ತಗ್ಗು ಪ್ರದೇಶದ ಹೊಲಗಳಲ್ಲಿ ನೀರು ತುಂಬಿದ್ದು, ಬದು ಒಡೆದು ನೀರು ಕಾಲುವೆಗೆ ಹರಿಯಿತು.
ಕೊಪ್ಪಳ ತಾಲ್ಲೂಕಿನಲ್ಲಿ ಕಾತರಕಿ-ಗುಡ್ಲಾನೂರ, ಡಂಬ್ರಳ್ಳಿ, ಬೇಳೂರು ಮತ್ತಿತರ ಗ್ರಾಮಗಳಲ್ಲಿ ಮಳೆ, ಗಾಳಿಯಿಂದಾಗಿ ನೂರಾರು ಎಕರೆ
ಯಲ್ಲಿ ಬೆಳೆದಿದ್ದ ಬಾಳೆ, ವೀಳ್ಯೆದೆಲೆ ಬಳ್ಳಿ ನೆಲಕಚ್ಚಿದೆ. ನುಗ್ಗೆ ಹಾಗೂ ಮಾವಿನ ಕಾಯಿಗಳು ಉದುರಿವೆ. ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕು ಹಾಗೂ ಬೀದರ್ ಜಿಲ್ಲೆ ಚಿಟಗುಪ್ಪ ಸುತ್ತಮುತ್ತ ಬಾಳೆ ಬೆಳೆ ಹಾನಿಯಾಗಿದೆ.
ಯುವಕ ಸಾವು: ಯಾದಗಿರಿ ಜಿಲ್ಲೆ ಗುರುಮಠಕಲ್ ಬಳಿ ಕಾಕಲವಾರದಲ್ಲಿ ಸಿಡಿಲುಬಡಿದು ಗಾಯಗೊಂಡಿದ್ದ ಪ್ರಕಾಶ ಮೊಗುಲಪ್ಪ ಕೊಟ್ಟಿ (22) ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಶೃಂಗೇರಿ ತಾಲ್ಲೂಕಿನ ಸುತ್ತಮುತ್ತ ಶನಿವಾರ ಸಾಧಾರಣ ಮಳೆಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ಹಾಗೂ ಬಳ್ಳಾರಿ ಜಿಲ್ಲೆ ಕೊಟ್ಟೂರಿನಲ್ಲಿ ಶನಿವಾರ ಬಿರುಗಾಳಿ ಸಹಿತ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.